ಬೆಂಗಳೂರು: 'ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಏರುತ್ತಿದ್ದು, ಜನಸಾಮಾನ್ಯರು ಸಂಕಷ್ಟದಲ್ಲಿದ್ದಾರೆ. ಜನರಿಗೆ ಮುಖ ಗುರುತು ಸಿಗಬಾರದು ಎಂಬ ಕಾರಣದಿಂದ ಪ್ರಧಾನಿ ನರೇಂದ್ರ ಮೋದಿ ಗಡ್ಡ ಬೆಳೆಸಿದ್ದಾರೆ' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ನಗರದಲ್ಲಿ ಭಾನುವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 'ಕೇಂದ್ರದಲ್ಲಿ ಅತಿ ಕೆಟ್ಟ ಸರ್ಕಾರ ಈಗ ಅಧಿಕಾರದಲ್ಲಿದೆ. ನರೇಂದ್ರ ಮೋದಿ ಸುಳ್ಳಿಗೆ ಪರ್ಯಾಯ ಪದ. ಮೋದಿ ಮೋದಿ ಎಂದು ಕೂಗುತ್ತಾ ಅವರನ್ನು ಅಧಿಕಾರಕ್ಕೆ ತಂದ ಯುವಸಮೂಹಕ್ಕೆ ಅನ್ಯಾಯ ಮಾಡಿದ್ದಾರೆ. ಅವರ ಬಣ್ಣವನ್ನು ಬಯಲು ಮಾಡುವ ಜವಾಬ್ದಾರಿ ಕಾಂಗ್ರೆಸ್ ಪಕ್ಷದ್ದು' ಎಂದರು.
'ಕರ್ನಾಟಕದಲ್ಲಿ ಅನೈತಿಕ, ಅಸಮರ್ಥ, ಭ್ರಷ್ಟ ಸರ್ಕಾರವಿದೆ. ಏನು ಕೇಳಿದರೂ ದುಡ್ಡಿಲ್ಲ, ದುಡ್ಡಿಲ್ಲ ಎನ್ನುತ್ತಾರೆ. ದುಡ್ಡಿಲ್ಲ ಎಂದ ಮೇಲೆ ಅಧಿಕಾರದಲ್ಲಿ ಏಕೆ ಇದ್ದೀರಿ. ಕುರ್ಚಿಯಿಂದ ಇಳಿಯಿರಿ. ನಾವ್ಯಾರಾದರೂ ಬಂದು ಕೂರುತ್ತೇವೆ' ಎಂದರು.