ಬೆಂಗಳೂರು: ‘ಜಲವಿವಾದಗಳನ್ನು ಮಾತುಕತೆ ಮೂಲಕವೇ ಪರಿಹರಿಸಿಕೊಳ್ಳುವುದು ಉತ್ತಮ ಬೆಳವಣಿಗೆ’ ಎಂದು ಬಿಜೆಪಿ ಮುಖಂಡ ಎಸ್.ಎಂ.ಕೃಷ್ಣ ಹೇಳಿದರು.
ನಗರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ, ನಿವೃತ್ತ ಐಪಿಎಸ್ ಅಧಿಕಾರಿ ಸಿ.ಚಂದ್ರಶೇಖರ್ ಅವರ ‘ಕಾವೇರಿ ವಿವಾದ...: ಒಂದು ಚಾರಿತ್ರಿಕ ಹಿನ್ನೋಟ’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
‘ಮಾಜಿ ಪ್ರಧಾನಿ ದಿವಂಗತ ಎ.ಬಿ.ವಾಜಪೇಯಿ ಅವರು ಕಾವೇರಿ ಜಲವಿವಾದ ಕುರಿತು ಮತ್ತು ಜಯ ಲಲಿತಾ ನಡುವೆ ಮಧ್ಯಸ್ಥಿಕೆ ವಹಿಸಿದ್ದು, ಚಾಣಾಕ್ಷತನ ಹಾಗೂ ನಿಷ್ಪಕ್ಷಪಾತ ದಿಂದ ಸಂಧಾನ ಮಾಡಿದ್ದರು. ಜಯ ಲಲಿತಾ ಸಂಧಾನ ಸೂತ್ರ ಒಪ್ಪುತ್ತಿರಲಿಲ್ಲ. ಇದರಿಂದ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು’ ಎಂದರು. ‘ಕೋರ್ಟ್ನಲ್ಲಿ ನಾನು ಕ್ಷಮಾಪಣೆ ಕೇಳಬೇಕಾಗಿತ್ತು. ಆದರೆ, ವಕೀಲರ ವಾದದಿಂದ ಪಾರಾಗಿದ್ದೆ’ ಎಂದರು.
‘ಕರುಣಾನಿಧಿ ಅವರ ಜೊತೆಯಲ್ಲೂ ಕಾವೇರಿ ನದಿ ನೀರು ಹಂಚಿಕೆ ಬಗ್ಗೆ ಚರ್ಚಿಸಿದ್ದೆ. ಅವರು ಬಹಳ ತಾಳ್ಮೆಯಿಂದ ಉಪಾಯ ಹೇಳಿಕೊಡುತ್ತಿದ್ದರು. ಆದರೆ, ಜಯಲಲಿತಾ ಅವರು ಕರ್ನಾಟಕವನ್ನು ವಿರೋಧಿಸಲೇ ಬರುತ್ತಿದ್ದರು’ ಎಂದರು.
ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್, ಅಣೆಕಟ್ಟುಗಳ ಹೂಳು ತೆಗೆದು, ಸುರಕ್ಷತೆಯನ್ನು ಕಾಪಾಡಬೇಕು ಎಂದರು.
ಕಾಡು ಮಲ್ಲೇಶ್ವರ ಗೆಳೆಯರ ಬಳಗ ಅಧ್ಯಕ್ಷ ಬಿ.ಕೆ.ಶಿವರಾಂ ಅವರು, ‘ಚಂದ್ರಶೇಖರ್ ಆಳವಾದ ಅಧ್ಯಯನ ನಡೆಸಿ ಕೃತಿ ಬರೆದಿದ್ದಾರೆ’ ಎಂದರು.
ಲೇಖಕ ಸಿ.ಚಂದ್ರಶೇಖರ್, ಪತ್ರಕರ್ತ ಶೇಷಚಂದ್ರಿಕಾ, ಕೆಪಿಎಸ್ಸಿ ಸದಸ್ಯರಾದ ರೊನಾಲ್ಡೊ ಆನಿಲ್ ಫರ್ನಾಂಡೀಸ್, ಜಯಪ್ರಕಾಶ್, ಅಭಿರುಚಿ ಪ್ರಕಾಶನ ಪ್ರಕಾಶಕ ಗಣೇಶ್ ಇದ್ದರು.