ವಿಧಾನ ಪರಿಷತ್: ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಹಾಗೂ ರಾಜ್ಯ ಶಿಕ್ಷಣ ನೀತಿ (ಎಸ್ಇಪಿ) ವಿಷಯದ ಪ್ರಸ್ತಾಪ ಬಿಜೆಪಿ–ಕಾಂಗ್ರೆಸ್ ಸದಸ್ಯರ ಮಧ್ಯೆ ವಾಗ್ವಾದಕ್ಕೆ ದಾರಿ ಮಾಡಿಕೊಟ್ಟಿತು.
ನಿಯಮ 330ರ ಅಡಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ, ದೇಶದಲ್ಲೇ ಏಕ ರೀತಿಯ ಶಿಕ್ಷಣದ ಧ್ಯೇಯೋದ್ದೇಶದಿಂದ ರೂಪಿಸಿರುವ ಎನ್ಇಪಿಯನ್ನು ರಾಜ್ಯ ಸರ್ಕಾರ ರಾಜಕೀಯ ಕಾರಣಗಳಿಗಾಗಿ ರದ್ದು ಮಾಡುತ್ತಿರುವುದು ಸಲ್ಲದು. ಸಿಬಿಎಸ್ಇ, ಐಸಿಎಸ್ಇ ಪಠ್ಯಕ್ರಮ ಅನುಸರಿಸುವ ಖಾಸಗಿ ಶಾಲೆಗಳು ಎನ್ಇಪಿ ಅಳವಡಿಸಿಕೊಳ್ಳುವಾಗ, ಒಂದು ಕೋಟಿಗೂ ಹೆಚ್ಚಿನ ಮಕ್ಕಳು ಪ್ರತ್ಯೇಕ ಪಠ್ಯಕ್ರಮ ಅನುಸರಿಸುವುದು ಸೂಕ್ತವಲ್ಲ. ಇದರಿಂದ ಮಕ್ಕಳ ಶಿಕ್ಷಣದಲ್ಲಿ ತಾರತಮ್ಯ ಮಾಡಿದಂತಾಗುತ್ತದೆ ಎಂದರು.
ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, 2020ಕ್ಕಿಂತ ಮೊದಲು ಮಕ್ಕಳು ಉತ್ತಮವಾಗಿ ಓದಿಲ್ಲವೇ? ದೇಶ, ವಿದೇಶಗಳಲ್ಲಿ ಹೆಸರು ಮಾಡಿಲ್ಲವೇ? ರಾಜ್ಯ ಶಿಕ್ಷಣ ನೀತಿಯನ್ನು ಏಕೆ ಲಘುವಾಗಿ ಪರಿಗಣಿಸುವಿರಿ ಎಂದರು.
ತೇಜಸ್ವಿನಿ ಗೌಡ, ನವೀನ್ಕುಮಾರ್, ಎನ್.ರವಿಕುಮಾರ್, ಎಂ.ನಾಗರಾಜ್, ಯು.ಬಿ.ವೆಂಕಟೇಶ್, ಶಶೀಲ್ ನಮೋಶಿ, ಎಸ್.ವಿ.ಸಂಕನೂರ, ಡಿ.ಎಸ್.ಅರುಣ್, ಹಣಮಂತ ನಿರಾಣಿ, ಟಿ.ಎ.ಶರವಣ, ಛಲವಾದಿ ನಾರಾಯಣ ಸ್ವಾಮಿ, ಸುನೀಲ್ ವಲ್ಯಾಪುರೆ ಸೇರಿದಂತೆ 20ಕ್ಕೂ ಹೆಚ್ಚು ಸದಸ್ಯರು ಎರಡೂ ಶಿಕ್ಷಣ ನೀತಿಗಳ ಪರ–ವಿರುದ್ಧ ಅಭಿಪ್ರಾಯ ಮಂಡಿಸಿದರು. ಜೆಡಿಎಸ್ನ ಎಸ್.ಎಲ್.ಭೋಜೇಗೌಡ, ಯಾವುದೇ ನೀತಿಯಾಗಲಿ ಪೂರ್ಣ ಪ್ರಮಾಣದ ಶಿಕ್ಷಕರು, ಸಿಬ್ಬಂದಿ ಒಳಗೊಂಡ ಸಮಗ್ರ ಶಿಕ್ಷಣ ನೀತಿ ರಾಜ್ಯಕ್ಕೆ ನೀಡಲಿ ಎಂದರು.
ರಾಜ್ಯ ಶಿಕ್ಷಣ ನೀತಿಯನ್ನು ಬಲವಾಗಿ ಸಮರ್ಥಿಸಿಕೊಂಡ ಜೆಡಿಎಸ್ನ ಮರಿತಿಬ್ಬೇಗೌಡ, ಎನ್ಇಪಿ ಬಡವರು ಉನ್ನತ ಶಿಕ್ಷಣ ಪಡೆಯದಂತೆ ಮಾಡುತ್ತದೆ. ಅವೈಜ್ಞಾನಿಕ ನೀತಿಯಿಂದಾಗಿ ಹಲವು ಕಾಲೇಜುಗಳು ಈಗಾಗಲೇ ಬಾಗಿಲು ಮುಚ್ಚಿವೆ ಎಂದು ಹೇಳಿದ್ದು ಬಿಜೆಪಿ ಸದಸ್ಯರನ್ನು ಕೆರಳಿಸಿತು. ಗದ್ದಲದ ಮಧ್ಯೆಯೇ ಎಲ್ಲರ ಮಾತನ್ನೂ ಆಲಿಸುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಉತ್ತರ ನೀಡುವುದಾಗಿ ಹೇಳಿದರು. ಸಭಾಪತಿ ಸ್ಥಾನದಲ್ಲಿದ್ದ ಉಪ ಸಭಾಪತಿ ಕೆ.ಎಂ.ಪ್ರಾಣೇಶ್, ಒಂದೇ ವಿಷಯದ ಮೇಲೆ ಅರ್ಧದಿನ ನಡೆದ ಕಲಾಪವನ್ನು ಮರುದಿನಕ್ಕೆ ಮುಂದೂಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.