ಚಿಕ್ಕಮಗಳೂರು: ರಾಜ್ಯದ ಹೊಸ ಪ್ರವಾಸೋದ್ಯಮ ನೀತಿಯನ್ನು( 2020-2025) ಜೂನ್ ಅಂತ್ಯದೊಳಗೆ ಪ್ರಕಟಿಸುತ್ತೇವೆ ಎಂದು ಪ್ರವಾಸೋದ್ಯಮ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇದೇ ಸಮಯದಲ್ಲಿ ಚಿಕ್ಕಮಗಳೂರು ಜಿಲ್ಲಾ ಪ್ರವಾಸೋದ್ಯಮ ನೀತಿಯನ್ನು ಪ್ರಕಟಿಸುತ್ತೇವೆ. ಬೇರೆ ಜಿಲ್ಲೆಗಳಲ್ಲೂ ಜಿಲ್ಲಾ ಪ್ರವಾಸೋದ್ಯಮ ನೀತಿ ರಚಿಸಿಕೊಳ್ಳುವ ನಿಟ್ಟಿನಲ್ಲಿ ಗಮನಹರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ತಿಳಿಸಲಾಗುವುದು' ಎಂದರು.
ಕೋವಿಡ್-19 ತಲ್ಲಣದಿಂದ ಜಾಗತಿಕಮಟ್ಟದಲ್ಲಿ ಪ್ರವಾಸೋದ್ಯಮ ನೆಲಕಚ್ಚಿದೆ. ಲಾಕ್ ಡೌನ್ ತೆರವು ನಂತರ ಪ್ರವಾಸೋದ್ಯಮ ಪುನಶ್ಚೇತನ ನಿಟ್ಟಿನಲ್ಲಿ ಸ್ಥಳೀಯ ಪ್ರವಾಸಿಗರನ್ನು ಅವಲಂಬಿಸುವುದು ಅನಿವಾರ್ಯ. 'ಲವ್ ಯುವರ್ ನೇಟಿವ್' ಪರಿಕಲ್ಪನೆ ಯಲ್ಲಿ ಇದನ್ನು ಮಾಡಲಾಗುವುದು. ಸಿಂಗಪುರದಲ್ಲಿ ಇಂಥದ್ದೊಂದು ಪ್ರಯೋಗ ಮಾಡಿದ್ದಾರೆ' ಎಂದು ತಿಳಿಸಿದರು.