ನವದೆಹಲಿ: ಕಾಶ್ಮೀರದ ಪ್ರತ್ಯೇಕತಾವಾದಿ ಯಾಸಿನ್ ಮಲಿಕ್ಗೆ ಸಂಬಂಧಿಸಿದ ವರದಿಯಲ್ಲಿದ್ದ ವೈದ್ಯಕೀಯ ಪರಿಭಾಷೆಯೊಂದು ಅರ್ಥವಾಗದ ಕಾರಣ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು,ವೈದ್ಯರೊಬ್ಬರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು.
ಭಯೋತ್ಪಾದಕ ಕೃತ್ಯಕ್ಕೆ ಆರ್ಥಿಕ ನೆರವು ನೀಡಿದ್ದು ಸೇರಿದಂತೆ ಎರಡು ಪ್ರಕರಣಗಳಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಲಿಕ್ನ ಹಳೆಯ ಇ–ಮೇಲ್ ಹಾಗೂ ಸಂದೇಶಗಳನ್ನು ಎನ್ಎಐ ಕೂಲಂಕಷವಾಗಿ ಪರಿಶೀಲಿಸುತ್ತಿದೆ. ಈ ವೇಳೆ ಮಲಿಕ್ ಹಾಗೂ ಹೃದ್ರೋಗ ತಜ್ಞ ಉಪೇಂದ್ರ ಕೌಲ್ ನಡುವೆ ವಿನಿಮಯವಾಗಿದ್ದ ಸಂದೇಶದಲ್ಲಿ ‘ಐಎನ್ಆರ್ 2.78’ ಎನ್ನುವ ಅಂಶ ಉಲ್ಲೇಖವಾಗಿತ್ತು. ಆದರೆ ಎನ್ಐಎ ಅಧಿಕಾರಿಗಳು ಇದನ್ನು ಹವಾಲಾ ಹಣ ಎಂದು ಭಾವಿಸಿದ್ದರು.
ಎನ್ಐಎ ಕಚೇರಿಗೆ ಹಾಜರಾಗಿ ಈ ಕುರಿತು ವಿವರಣೆ ನೀಡಿದ ವೈದ್ಯ ಉಪೇಂದ್ರ ಕೌಲ್ ಅವರು, ರಕ್ತಪರೀಕ್ಷೆಯ ವರದಿಯನ್ನು ವಿವರಿಸಿದ್ದಾರೆ. ಇದು ಅರಿವಾದ ಬಳಿಕ ಅಧಿಕಾರಿ ಇದನ್ನು ತಮ್ಮ ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ. ಬಳಿಕ ಕೌಲ್ ಅವರಿಗೆ ಈ ಸಂಬಂಧ ಕ್ಲೀನ್ಚಿಟ್ ನೀಡಲಾಗಿದೆ.
‘ಎಲ್ಲರಿಗೂ ವೈದ್ಯಕೀಯ ಪರಿಭಾಷೆ ತಿಳಿದಿರುವುದಿಲ್ಲ’ ಎಂದು ಕೌಲ್ ಪ್ರತಿಕ್ರಿಯಿಸಿದ್ದಾರೆ.
ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿರುವ ಮಲಿಕ್ಗೆ ಕೌಲ್ ಅವರು ಎರಡುದಶಕಗಳಿಂದ ಚಿಕಿತ್ಸೆ ನೀಡುತ್ತಿದ್ದಾರೆ.