ಬೆಂಗಳೂರು: ‘ಹಜ್ ಭವನಕ್ಕೆ ಟಿಪ್ಪು ಹೆಸರಿಡುವಂತೆ ಪ್ರಸ್ತಾಪ ಬಂದಿದೆ ಅಷ್ಟೆ. ಇನ್ನೂ ಈ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ’ ಎಂದು ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿದರು.
‘ಮುಖ್ಯಮಂತ್ರಿ ಕುಮಾರಸ್ವಾಮಿ, ಜಿ. ಪರಮೇಶ್ವರ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಜತೆ ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಯಡಿಯೂರಪ್ಪ ಜತೆಗೂ ಚರ್ಚೆ ಮಾಡುತ್ತೇನೆ’ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
‘ಹಜ್ ಭವನಕ್ಕೆ ಯಡಿಯೂರಪ್ಪ ₹ 40 ಕೋಟಿ ಅನುದಾನ ನೀಡಿದ್ದಾರೆ. ಅಬ್ದುಲ್ ಕಲಾಂ ಹೆಸರು ಇಡುವಂತೆ ಅವರು ಸಲಹೆ ನೀಡಿದ್ದಾರೆ. ಅವರ ಸಲಹೆಯನ್ನೂ ಸ್ವೀಕರಿಸುತ್ತೇನೆ’ ಎಂದರು.
ಐಷಾರಾಮಿ ಕಾರು ಕೇಳಿಲ್ಲ: ‘ನಾನೇನು ಐಷಾರಾಮಿ ಕಾರು ಕೇಳಿಲ್ಲ. ಈಗಾಗಲೇ ಇರುವ ಸರ್ಕಾರಿ ಕಾರು ಕೇಳಿದ್ದೇನೆ. ರೈತರ ಸಾಲ ಮನ್ನಾ ಮಾಡಲು ಕುಮಾರಸ್ವಾಮಿ ಒದ್ದಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಹೊಸ ಕಾರು ಕೇಳುತ್ತೇನೆಯೇ’ ಎಂದು ಪ್ರಶ್ನಿಸಿದರು.
‘ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಬಾರದು ಎಂದು ಹೇಳಿಲ್ಲ. ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅಷ್ಟೆ. ರಾಹುಲ್ ಗಾಂಧಿ ಕೂಡಾ ಬಜೆಟ್ ಮಂಡನೆಗೆ ಸಮ್ಮತಿಸಿದ್ದಾರೆ. ಈ ಬಗ್ಗೆ ಯಾವುದೇ ಗೊಂದಲ ಇಲ್ಲ’ ಎಂದೂ ಸ್ಪಷ್ಟಪಡಿಸಿದರು.