ಹೆತ್ತೂರು (ಹಾಸನ): ಯಸಳೂರಿನ ದಬ್ಬಳಿಕಟ್ಟೆ ಅರಣ್ಯ ಪ್ರದೇಶದಲ್ಲಿರುವ ಅರ್ಜುನನ ಸಮಾಧಿ ಸ್ಥಳದಲ್ಲಿ ಗುರುವಾರ ರಾತ್ರಿ ಕಾಡಾನೆಗಳ ಹಿಂಡು ದಾಂದಲೆ ನಡೆಸಿವೆ. ಸುತ್ತಲೂ ಅಳವಡಿಸಿದ್ದ ತಂತಿ ಬೇಲಿ ಕಿತ್ತು ಹಾಕಿವೆ.
ತಂತಿ ಬೇಲಿ ಮುರಿದು ಒಳಗೆ ಪ್ರವೇಶಿಸಿದ ಆನೆಗಳು, ಸಮಾಧಿಯ ಮೇಲೆ ಹಾಕಿದ್ದ ಹೂಗಳನ್ನು ಚೆಲ್ಲಾಪಿಲ್ಲಿ ಮಾಡಿವೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
11 ದಿನದ ಪೂಜೆ: ಡಿ.4 ರಂದು ಕಾಡಾನೆ ಜೊತೆಗಿನ ಕಾಳಗದಲ್ಲಿ ಅರ್ಜುನ ಮೃತಪಟ್ಟಿದ್ದು, 11ನೇ ದಿನವಾದ ಶುಕ್ರವಾರ ಯಸಳೂರು, ಬಾಳೆಕೆರೆ, ದಬ್ಬಳ್ಳಿ, ಚಿಕ್ಕದೂರು, ದೊಡ್ಡಕುಂದೂರು ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ, ಯಸಳೂರಿನ ನವೀನಾರಾಧ್ಯ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ನಡೆಯಿತು.
ಸಮಾಧಿ ಶುಚಿಗೊಳಿಸಿ, ಹೂಗಳಿಂದ ಸಿಂಗರಿಸಿ, ಅರ್ಜುನನ ಭಾವಚಿತ್ರವಿಟ್ಟು ಪೂಜಿಸಲಾಯಿತು. ಬಳಿಕ ಅರ್ಚಕರು ಹಾಲು-ತುಪ್ಪ ಸಮರ್ಪಣೆ ಮಾಡಿದರು. ಮಾವುತ ವಿನು ಕುಟುಂಬದ ಸದಸ್ಯರು ಸಮಾಧಿ ಬಳಿ ಬಿಕ್ಕಿ ಬಿಕ್ಕಿ ಅಳುತ್ತಲೇ ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಯಸಳೂರು ಹೋಬಳಿಯ ದಬ್ಬಳಿಕಟ್ಟೆ ಅರಣ್ಯದಲ್ಲಿ ಇರುವ ಅರ್ಜುನ ಸಮಾಧಿಗೆ ಮಾವುತ ವಿನು ಕುಟುಂಬದ ಸದಸ್ಯರು ಪೂಜೆ ಸಲ್ಲಿಸಿದರು