ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಶಾಂತ್ ತಿಮ್ಮಯ್ಯ ವಜಾ

Published 31 ಆಗಸ್ಟ್ 2023, 16:02 IST
Last Updated 31 ಆಗಸ್ಟ್ 2023, 16:02 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಶಾಂತ್‌ ತಿಮ್ಮಯ್ಯ ಅವರ ಹುದ್ದೆಯ ಅವಧಿ 2022ರಲ್ಲೇ ಮುಗಿದಿದ್ದು, ಅವರನ್ನು ವಜಾ ಮಾಡಿ ರಾಜ್ಯ ಸರ್ಕಾರ ಗುರುವಾರ ಅಧಿಸೂಚನೆ ಹೊರಡಿಸಿದೆ.

ಜಲ ಕಾಯ್ದೆಯಂತೆ ಹಾಗೂ ಅಧ್ಯಕ್ಷರ ನೇಮಕಾತಿಯ ನಿಯಮಾವಳಿಗಳ ಪ್ರಕಾರ ಶಾಂತ್‌ ತಿಮ್ಮಯ್ಯ ಅವರ ಅವಧಿ ಮುಗಿದಿರುವುದರಿಂದ ತತ್‌ಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ. ಹೊಸ ಅಧ್ಯಕ್ಷರು ಆಯ್ಕೆಯಾಗುವವರೆಗೂ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಅಧ್ಯಕ್ಷ ಹುದ್ದೆಯನ್ನು ಹೆಚ್ಚುವರಿಯಾಗಿ ವಹಿಸಿ ಆದೇಶಿಸಲಾಗಿದೆ.

ಜಲ ಕಾಯ್ದೆ ಸೆಕ್ಷನ್‌ 5(6) ಪ್ರಕಾರ ಮಂಡಳಿಯ ಅಧ್ಯಕ್ಷ ಹುದ್ದೆಯ ಅವಧಿ ಮೂರು ವರ್ಷ. ಅಧ್ಯಕ್ಷರ ಆಯ್ಕೆಯ ನಿಯಮಾವಳಿಯಂತೆ 2021 ನವೆಂಬರ್‌ 15ರಂದು ಹೊರಡಿಸಿರುವ ನೇಮಕ ಆದೇಶಕ್ಕೆ (ಎಫ್‌ಇಇ 143 ಇಪಿಸಿ 2020) ತಿದ್ದುಪಡಿ ಮಾಡಿರುವುದರಿಂದ, ಈಗಿನ ಅಧ್ಯಕ್ಷರ ಅವಧಿ 2022ರ ಮಾರ್ಚ್ 4ರಂದೇ ಮುಗಿದಿದೆ ಎಂದು ತಿಳಿಸಲಾಗಿದೆ.

ತಿದ್ದುಪಡಿ: ಜಲ ಕಾಯ್ದೆಯಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನೇಮಕ ಮಾಡಲಾಗುತ್ತಿದ್ದು, 2012ರಲ್ಲಿ ನೇಮಕವಾದ ವಾಮನಾಚಾರ್ಯ, 2015ರಲ್ಲಿ ನೇಮಕವಾದ ಲಕ್ಷ್ಮಣ್‌ ಅವರು ತಲಾ ಮೂರು ವರ್ಷದ ಅವಧಿಯನ್ನು ಪೂರ್ಣಗೊಳಿಸಿದ್ದಾರೆ.

2019ರ ಮಾರ್ಚ್ 5ರಂದು ಅಧ್ಯಕ್ಷ ಹುದ್ದೆಗೆ ಮೂರು ವರ್ಷದ ಅವಧಿಗೆ ಜಯರಾಂ ಅವರನ್ನು ನೇಮಕ ಮಾಡಲಾಗಿತ್ತು. ಅವರು 2019ರ ಜೂನ್‌ 20ರಂದು ರಾಜೀನಾಮೆ ನೀಡಿದರು. ಜೂನ್‌ 21ರಿಂದ ಸೆಪ್ಟೆಂಬರ್ 21ರವರೆಗೆ ಡಾ. ಕೆ. ಸುಧಾಕರ್‌ ಅಧ್ಯಕ್ಷರಾಗಿದ್ದರು. ನಂತರ, ಡಾ. ಸಂದೀಪ್‌ ದವೆ 2019ರ ಸೆಪ್ಟೆಂಬರ್‌ 21ರಿಂದ ಡಿಸೆಂಬರ್‌ 21ರವರೆಗೆ; ಡಾ. ಸುಧೀಂದ್ರ ರಾವ್‌ ಡಿಸೆಂಬರ್‌ 29ರಿಂದ 2020 ಮೇ 2ರವರೆಗೆ; ವಿಜಯಕುಮಾರ್‌ ಗೋಗಿ ಮೇ 2ರಿಂದ 2021ರ ಮಾರ್ಚ್‌ 1ರವರೆಗೆ; ಬ್ರಿಜೇಶ್‌ಕುಮಾರ್‌ ಮಾರ್ಚ್‌ 1ರಿಂದ ನವೆಂಬರ್‌ 15ರವರಗೆ ಅಧ್ಯಕ್ಷರಾಗಿದ್ದರು. 

ಶಾಂತ್‌ ಎ. ತಿಮ್ಮಯ್ಯ 2021ರ ನವೆಂಬರ್‌ 15ರಿಂದ ಅಧ್ಯಕ್ಷ ಹುದ್ದೆ ವಹಿಸಿಕೊಂಡಿದ್ದು, ಅವರ ಅವಧಿ 2022ರ ಮಾರ್ಚ್‌ 3ರವರೆಗಿತ್ತು. ಕಾಯ್ದೆ, ನಿಯಮಾವಳಿಗಳ ಪ್ರಕಾರ, ಅಧ್ಯಕ್ಷ ಹುದ್ದೆ ಅವಧಿ ಜಯರಾಂ ಅವರ ನೇಮಕವಾದ 2019ರ ಜೂನ್‌ 20ರಿಂದ ಆರಂಭವಾಗಿದೆ. ಅದು 2022ರ ಮಾರ್ಚ್‌ 4ಕ್ಕೆ ಮುಗಿದಿದೆ. ಆ ಅವಧಿಯಲ್ಲಿ ಜಯರಾಂ ನಂತರ, ಆರು ಮಂದಿ ಅಧ್ಯಕ್ಷರಾಗಿದ್ದಾರೆ. ಹೀಗಾಗಿದ್ದರೂ, ಶಾಂತ್‌ ತಮ್ಮಯ್ಯ ಅವರ ನೇಮಕ ಆದೇಶದಲ್ಲಿ 2024ರ ನವೆಂಬರ್‌ 14ರವರೆಗೆ ಎಂದು ಅವಧಿ ತಪ್ಪಾಗಿ ನಮೂದಾಗಿದೆ. ಅದನ್ನು 2022ರ ಮಾರ್ಚ್‌ 4 ಎಂದು ಬದಲಿಸಿ, ತಿದ್ದುಪಡಿ ಆದೇಶವನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಹೊರಡಿಸಿದೆ.

ಈ ತಿದ್ದುಪಡಿ ಆದೇಶದಂತೆ, ಶಾಂತ್‌ ತಿಮ್ಮಯ್ಯ ಅವರ ಅವಧಿ ಮುಗಿದು ಹೋಗಿರುವುದರಿಂದ ಅವರನ್ನು ಅಧ್ಯಕ್ಷ ಹುದ್ದೆಯಿಂದ ಆಗಸ್ಟ್‌ 31ರಂದು ಬಿಡುಗಡೆ ಮಾಡಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಪಕ್ಷಪಾತ, ಕಾಯ್ದೆ ಉಲ್ಲಂಘನೆ ಆರೋಪ

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಶಾಂತ್‌ ತಿಮ್ಮಯ್ಯ ನೇತೃತ್ವದ ‘ಸಿಂಗಲ್ ಸೋರ್ಸ್ ಕಮಿಟಿ’ ಸಭೆಯಲ್ಲಿ ₹17.85 ಕೋಟಿ ಮೌಲ್ಯದ ಜಾಗೃತಿ ಕಾರ್ಯಕ್ರಮಗಳನ್ನು ನಿರ್ವಹಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕ ಕಾಯ್ದೆ -1999 ಅನ್ನು (ಕೆಟಿಪಿಪಿ) ಉಲ್ಲಂಘಿಸಲಾಗಿದೆ ಎಂದು ಜುಲೈ 3ರಂದು ಮಂಡಳಿಯ ಸದಸ್ಯ ಕಾರ್ಯದರ್ಶಿಯಾಗಿದ್ದ ಸೂರಿ ಪಾಯಲ್ ಅವರೇ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಜುಲೈ 17 ರಂದು ‘ಮಾಲಿನ್ಯ ನಿಯಂತ್ರಣ ಮಂಡಳಿ - ಸರ್ಕಾರದ ಮಧ್ಯೆ ಸಂಘರ್ಷ’ ಶೀರ್ಷಿಕೆಯಲ್ಲಿ ವರದಿ ಪ್ರಕಟವಾಗಿತ್ತು. ವಿಧಾನಪರಿಷತ್‌ ಮಾಜಿ ಸದಸ್ಯ ಪಿ.ಆರ್‌. ರಮೇಶ್‌ ಅವರು ಮುಖ್ಯಮಂತ್ರಿಯವರಿಗೆ ಪತ್ರ ಬರೆದು ತನಿಖೆಗೆ ಆಗ್ರಹಿಸಿದ್ದರು. ಇದನ್ನೆಲ್ಲ ಆಧರಿಸಿ ಸರ್ಕಾರ ತನಿಖಾ ಸಮಿತಿ ರಚಿಸಿತ್ತು.

‘ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಜಾಗೃತಿ ಕಾರ್ಯಕ್ರಮಗಳ ಕಾರ್ಯಾದೇಶ ನೀಡುವಲ್ಲಿ ಕಾಯ್ದೆಗಳನ್ನು ಉಲ್ಲಂಘಿಸಿದ್ದಾರೆ. ಜಲ ಮಾಲಿನ್ಯ ಕಾಯ್ದೆ 1974 ಮತ್ತು ವಾಯು ಮಾಲಿನ್ಯ ಕಾಯ್ದೆ 1981ರ ಪ್ರಕಾರ ಮಂಡಳಿ ಅಧ್ಯಕ್ಷರಿಗೆ ಯಾವುದೇ ಸಮಿತಿಯನ್ನು ರಚಿಸುವ ಅಧಿಕಾರ ಇಲ್ಲ. ಅಧ್ಯಕ್ಷ ಶಾಂತ್ ತಿಮ್ಮಯ್ಯ ಅದನ್ನು ಉಲ್ಲಂಘಿಸಿ ಏಕ ಸಮಿತಿಯನ್ನು ರಚಿಸಿದ್ದಾರೆ ಎಂದು ರಾಜ್ಯ ಸರ್ಕಾರ ನೇಮಿಸಿದ್ದ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆ ಹೆಚ್ಚುವರಿ ನಿರ್ದೇಶಕ ಮಹದೇವ ಅವರ ತನಿಖಾ ಸಮಿತಿ ಪ್ರಾಥಮಿಕ ವರದಿ ನೀಡಿತ್ತು.

₹19.92 ಕೋಟಿ ಮೌಲ್ಯದ ಜಾಹೀರಾತು ನೀಡುವ ಬಗ್ಗೆ ಐದು ಸಂಸ್ಥೆಗಳ ಪ್ರಸ್ತಾವನೆ ಪರಿಗಣಿಸಿ, ನಾಲ್ಕು ಸಂಸ್ಥೆಗಳನ್ನು ಏಕ ಮೂಲ ಸಂಸ್ಥೆ ಎಂದು ಪರಿಗಣಿಸಿ, ಯೋಜಿತ ವ್ಯಕ್ತಿಗಳಿಗೆ ಗುತ್ತಿಗೆ ನೀಡುವ ಉದ್ದೇಶದಿಂದ, ಸ್ಪರ್ಧಾತ್ಮಕತೆ ನಿಯಂತ್ರಿಸುವ ಉದ್ದೇಶದಿಂದ ಪಕ್ಷಪಾತ ಎಸಗಿರುವುದು ಕಂಡುಬಂದಿದೆ ಎಂದೂ ವರದಿಯಲ್ಲಿ ತಿಳಿಸಲಾಗಿತ್ತು. ಈ ಬಗ್ಗೆ ‘ಪ್ರಜಾವಾಣಿ’ ಆಗಸ್ಟ್‌ 17 ರಂದು ವರದಿ ಪ್ರಕಟಿಸಿತ್ತು. ತನಿಖಾ ಸಮಿತಿಯ ವರದಿ ಸಂಪೂರ್ಣವಾಗಿ ಸರ್ಕಾರಕ್ಕೆ ಸಲ್ಲಿಕೆಯಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT