ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಚಾರಕ್ಕಿಳಿದ ‘ಕೈ’ ಪಡೆ: ಅನರ್ಹರಿಗೆ ಕಾಯುತ್ತಿದೆ ಬಿಜೆಪಿ

ಉಪಚುನಾವಣೆಗೆ ಸಜ್ಜಾದ ದಳಪತಿಗಳು
Last Updated 1 ಡಿಸೆಂಬರ್ 2019, 13:41 IST
ಅಕ್ಷರ ಗಾತ್ರ

ಬೆಂಗಳೂರು: ಉಪಚುನಾವಣೆ ಸೆಣಸಲು ಕಾಂಗ್ರೆಸ್‌ ಈಗಾಗಲೇ ತೊಡೆತಟ್ಟಿ ಮೈದಾನಕ್ಕೆ ಇಳಿದಿದ್ದರೆ, ಅನರ್ಹತೆ ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಅನರ್ಹ ಶಾಸಕರು ಸಲ್ಲಿಸಿರುವ ಅರ್ಜಿ ಕುರಿತ ತೀರ್ಪು ತಮ್ಮ ಪರವಾಗಿ ಬರಲಿದೆ ಎಂಬ ನಿರೀಕ್ಷೆಯಲ್ಲಿ ಬಿಜೆಪಿ ಕಾದು ಕುಳಿತಿದೆ. ಇತ್ತ ಸದ್ದುಗದ್ದಲವಿಲ್ಲದೇಜೆಡಿಎಸ್‌ ತಯಾರಿ ನಡೆಸಿದೆ.

‘ಮೈತ್ರಿ’ ಸರ್ಕಾರಕ್ಕೆ ಕೈಕೊಟ್ಟು ಹೋಗಿ ಅನರ್ಹರಾಗಿರುವ ಎಲ್ಲರನ್ನೂ ಸೋಲಿಸಲು ಕಾಂಗ್ರೆಸ್‌ ಪಣ ತೊಟ್ಟಿದ್ದು, ಈ ಸಂಬಂಧ ಈಗಾಗಲೇ ಹಲವು ಸುತ್ತಿನ ಸಭೆಗಳನ್ನೂ ನಡೆಸಿದೆ. ಹೊಸಕೋಟೆ ಹಾಗೂ ಬೆಳಗಾವಿಯಲ್ಲಿ ಬೃಹತ್ ಸಮಾವೇಶ ನಡೆಸಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಹೋರಾಟಗಳನ್ನು ರೂಪಿಸುವ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸಿದೆ.

15 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯ ಕಸರತ್ತನ್ನೂ ಕಾಂಗ್ರೆಸ್ ಆರಂಭಿಸಿದ್ದು, ಎಲ್ಲ ಕ್ಷೇತ್ರಗಳಿಂದ ವರದಿ ತರಿಸಿಕೊಂಡಿದೆ. ಗೆಲ್ಲಬಲ್ಲ ಅಭ್ಯರ್ಥಿಗಳ ಹುಡುಕಾಟದ ಜತೆಗೆ ಬಿಜೆಪಿ ಮತ್ತು ಜೆಡಿಎಸ್‌ನಿಂದ ಅಸಮಾಧಾನಗೊಂಡು ವಲಸೆ ಬರುವವರ ಮೇಲೂ ಕಣ್ಣಿಟ್ಟಿದೆ. ಈಗಾಗಲೇ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದರೂ ಸುಪ್ರೀಂಕೋರ್ಟ್‌ನಲ್ಲಿ ಅನರ್ಹ ಶಾಸಕರ ಪ್ರಕರಣ ಏನಾಗುತ್ತದೆ ಎಂಬುದನ್ನು ನೋಡಿ ಮುಂದಿನ ಹೆಜ್ಜೆ ಇಡಲು ಆ ಪಕ್ಷ ತೀರ್ಮಾನಿಸಿದೆ.

ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಈವರೆಗೆ ಉಪ ಚುನಾವಣೆ ಬಗ್ಗೆ ತಲೆಕೆಡಿಸಿಕೊಂಡಿದ್ದೇ ಕಡಿಮೆ. ಪಕ್ಷದ ನೂತನ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಚುನಾವಣೆಯಲ್ಲಿ ಗೆಲುವಿನ ಜವಾಬ್ದಾರಿಯನ್ನು ಮುಖ್ಯಮಂತ್ರಿ ಹೆಗಲಿಗೆ ಹಾಕಿದ್ದಾರೆ. ಹೀಗಾಗಿ ಕಳೆದ ಎರಡು ಮೂರು ದಿನಗಳಿಂದ ಬಿ.ಎಸ್‌.ಯಡಿಯೂರಪ್ಪ ತಮ್ಮ ಆಪ್ತರೊಂದಿಗೆ ಚುನಾವಣೆ ರಣತಂತ್ರದ ಬಗ್ಗೆ ಸರಣಿ ಸಭೆ ನಡೆಸಿದ್ದಾರೆ.

ಪ್ರಚಾರಕ್ಕೂ ಇಳಿಯದ ಬಿಜೆಪಿ: ಉಪಚುನಾವಣೆ ನಡೆಯುವ 15 ಕ್ಷೇತ್ರಗಳಲ್ಲೂ ಪಕ್ಷದ ಸ್ಥಳೀಯ ಕಾರ್ಯಕರ್ತರ ಅಸಮಾಧಾನ ಮತ್ತು ವಿರೋಧವಿದ್ದರೂ ಅದನ್ನು ಪಕ್ಷ ಗಣನೆಗೆ ತೆಗೆದುಕೊಳ್ಳುವ ಸಾಧ್ಯತೆ ಇಲ್ಲ. ಅನರ್ಹರನ್ನು ಗೆಲ್ಲಿಸಿಕೊಂಡು ಬರುವಲ್ಲಿ ಪಕ್ಷದ ಕಾರ್ಯಕರ್ತರು ಎಷ್ಟರ ಮಟ್ಟಿಗೆ ಸಹಕರಿಸುತ್ತಾರೆ ಎಂಬುದು ಬಿಜೆಪಿ ನಾಯಕರ ಮುಂದಿರುವ ಯಕ್ಷ ಪ್ರಶ್ನೆ.

‘ಅನರ್ಹರು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆ ಆಗಲು ಸುಪ್ರೀಂಕೋರ್ಟ್‌ ನಿರ್ಧಾರ ಹೊರಬೀಳುವವರೆಗೆ ಕಾಯಲೇ ಬೇಕು. ಮಾನಸಿಕವಾಗಿಯೂ ಇವರು ಬಿಜೆಪಿ ಭಾಗವಾಗಿಲ್ಲ. ಬಿಜೆಪಿಯೂ ಇವರನ್ನು ತಮ್ಮವರೆಂದು ಇನ್ನೂ ಭಾವಿಸಿಲ್ಲ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಿ ಉಪಚುನಾವಣೆ ಎದುರಿಸುವುದು ಸುಲಭವಲ್ಲ’ ಎಂದು ಬಿಜೆಪಿ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಅನರ್ಹರ ಪರ ತೀರ್ಪು ಬರದೇ ಇದ್ದರೆ ಕೆಲವು ಕ್ಷೇತ್ರಗಳಲ್ಲಿ ಅವರು ಹೇಳಿದವರಿಗೆ ಟಿಕೆಟ್ ಕೊಡುವುದು. ಮತ್ತೆ ಕೆಲವು ಕಡೆ ಪಕ್ಷದ ನಿಷ್ಠಾವಂತರಿಗೆ ಟಿಕೆಟ್‌ ಕೊಡುವ ಲೆಕ್ಕಾಚಾರವೂ ನಡೆದಿದೆ. ಅನರ್ಹರು ಸ್ಪರ್ಧಿಸಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ಕೊಟ್ಟರೆ, ಆಗ ಎದುರಾಗಬಹುದಾದ ‘ನಿಷ್ಠಾವಂತರ’ ಬಂಡಾಯವನ್ನು ಶಮನ ಮಾಡುವುದು ತಲೆನೋವಾಗಲಿದೆ. ಅದನ್ನು ಎದುರಿಸುವ ಬಗ್ಗೆಯೂ ಪಕ್ಷದಲ್ಲಿ ಚರ್ಚೆ ಆರಂಭವಾಗಿದೆ’ ಎಂದು ಅವರು ಹೇಳಿದರು.

ಜೆಡಿಎಸ್‌ಗೂ ನಾಯಕರೂ ಚುನಾವಣೆ ರಣಕಹಳೆ ಮೊಳಗಿಸಿದ್ದಾರೆ. ಕಾಂಗ್ರೆಸ್‌ ಜತೆ ಹೊಂದಾಣಿಕೆ ಇಲ್ಲದೆ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಘೋಷಿಸಿದ್ದಾರೆ. ಆದರೆ, ಮೈಸೂರು ಜಿಲ್ಲೆಯಲ್ಲಿ ಜಿ.ಟಿ.ದೇವೇಗೌಡ ಮತ್ತು ಸಾ.ರಾ.ಮಹೇಶ್‌ ಅವರ ನಡುವಿನ ಕಿತ್ತಾಟ ದಳಪತಿಗಳ ತಲೆನೋವಿಗೆ ಕಾರಣವಾಗಿದೆ. ಇತ್ತ ಯಶವಂತಪುರ ಕ್ಷೇತ್ರದಲ್ಲಿ ಹಿಂದೆ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋತಿದ್ದ ಜವರಾಯಿಗೌಡ ಕಾಂಗ್ರೆಸ್‌ ಬಾಗಿಲು ತಟ್ಟಿದ್ದಾರೆ ಎನ್ನಲಾಗುತ್ತಿದೆ.

ಅಭ್ಯರ್ಥಿ ಆಖೈರುಗೊಳಿಸಲು ಎಲ್ಲ ಪಕ್ಷಗಳು ಸುಪ್ರೀಂಕೋರ್ಟ್‌ ತೀರ್ಪಿಗಾಗಿ ಕಾಯುತ್ತಿವೆ. ಬಿಜೆಪಿ ಅಭ್ಯರ್ಥಿ ಯಾರೆಂದು ನೋಡಿಕೊಂಡು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಚಿಂತನೆ ಕಾಂಗ್ರೆಸ್‌, ಜೆಡಿಎಸ್‌ ನಾಯಕರದ್ದಾಗಿದೆ.

ಹೊಸಕೋಟೆ: ಶರತ್‌ಗೆ ಟಿಕೆಟ್‌ ನಿರಾಕರಣೆ
ಹೊಸಕೋಟೆ: ಹೊಸಕೋಟೆ ಕ್ಷೇತ್ರದಲ್ಲಿ ಸಂಸದ ಬಿ.ಎನ್‌.ಬಚ್ಚೇಗೌಡ ಅವರ ಪುತ್ರ ಶರತ್‌ ಬಚ್ಚೇಗೌಡ ಅವರಿಗೆ ಟಿಕೆಟ್‌ ನೀಡಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಿರಾಕರಿಸಿದ್ದಾರೆ.

ಅನರ್ಹ ಶಾಸಕ ಎಂ.ಟಿ.ಬಿ.ನಾಗರಾಜ್‌ ಅವರಿಗೆ ಟಿಕೆಟ್‌ ನೀಡಲು ಈಗಾಗಲೇ ತೀರ್ಮಾನಿಸಲಾಗಿದೆ ಎಂದು ಯಡಿಯೂರಪ್ಪ ಅವರು ತಮ್ಮನ್ನು ಭೇಟಿ ಮಾಡಿದ ಹೊಸಕೋಟೆ ಕಾರ್ಯಕರ್ತರಿಗೆ ತಿಳಿಸಿದರು.

ಮಂಗಳವಾರ ನೂರಾರು ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ, ಶರತ್ ಬಚ್ಚೇಗೌಡರನ್ನೇ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆ ಮಾಡುವಂತೆ ಕೋರಿದರು.

ಶರತ್‌ ಬಚ್ಚೇಗೌಡ ಪ್ರತಿಕ್ರಿಯೆ: ‘ಎಂಟಿಬಿ ನಾಗರಾಜ್‌ ಅವರಿಗೆ ಕೊಟ್ಟ ಮಾತಿನಂತೆ ಪಕ್ಷದಿಂದ ಟಿಕೆಟ್‌ ನೀಡಲು ತೀರ್ಮಾನಿಸಲಾಗಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಆದರೆ, ಪಕ್ಷ ಸಂಘಟನೆಗಾಗಿ ದುಡಿದಿರುವ ನಾನು ಕೊನೇ ಕ್ಷಣದವರೆಗೂ ಹೋರಾಡುತ್ತೇನೆ. ಹಾಗೆಂದು ಕಾಂಗ್ರೆಸ್‌ ಸೇರುವ ಪ್ರಸ್ತಾವ ಇಲ್ಲ’ ಎಂದು ಶರತ್‌ ಹೇಳಿದರು.

ಮುಂದಿನ ಹೆಜ್ಜೆಯ ಬಗ್ಗೆ ತೀರ್ಮಾನಿಸಲು ಶರತ್‌ ಅವರು ಇದೇ 27 ರಂದು ಕಾರ್ಯಕರ್ತರ ಸಭೆ ಕರೆದಿದ್ದಾರೆ. ಅಲ್ಲಿ ಅವರು ಮುಂದಿನ ತೀರ್ಮಾನ ಪ್ರಕಟಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT