ಕಲಬುರಗಿ: ‘ನಾನು ಕೆಟ್ಟ ಹುಳವೋ, ಒಳ್ಳೆಯ ಹುಳವೋ ತೆಗೆದುಕೊಂಡು ನಿಮಗೇನು ಮಾಡುವುದಿದೆ? ನಮ್ಮ ತಂದೆ–ತಾಯಿ ತಾನೇ ನಮ್ಮನ್ನು ಸಂಬಾಳಿಸುತ್ತಿರುವುದು. ನಿಮ್ಮ ರಾಜಾರೋಷವನ್ನು ಕೇಂದ್ರ ಸರ್ಕಾರದ ಮುಂದೆ ತೋರಿಸಿ. ಕರ್ನಾಟಕದ ಜನರಿಗೆ, ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಅದರ ಬಗ್ಗೆ ಮಾತನಾಡಿ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
‘ಮಲ್ಲಿಕಾರ್ಜುನ ಖರ್ಗೆ ಅಂಥವರ ಹೊಟ್ಟೆಯಲ್ಲಿ ಇಂಥ ಕೆಟ್ಟ ಹುಳು ಹುಟ್ಟಿದೆಯಲ್ಲ ಅಂಥ ನನಗೆ ಆಶ್ಚರ್ಯ’ ಎಂಬ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಗೆ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು.
ಕಲಬುರಗಿಯ ಜಿಮ್ಸ್ ಆವರಣದಲ್ಲಿ ಅಪಘಾತ ಚಿಕಿತ್ಸಾ ವಿಭಾಗದ ಉದ್ಘಾಟನಾ ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈಶ್ವರಪ್ಪ ಅವರ ಹೇಳಿಕೆ ಅವರ ಸಂಸ್ಕೃತಿಯನ್ನು ತೋರಿಸುತ್ತಿದೆ. ಅವರು ಏನಾದರೂ ಬಾಯಿ ಬಡಿದುಕೊಳ್ಳಲಿ, ಎಲ್ಲಾದರೂ ಬಟ್ಟೆ ಹರಿದುಕೊಳ್ಳಲಿ, ನನಗೇನು ಮಾಡುವುದಿದೆ?’ ಎಂದು ಕಿಡಿಕಾರಿದರು.
‘ನಿಮ್ಮ ಹಿರಿತನಕ್ಕೆ ಗೌರವ ಕೊಟ್ಟು ನಾನು ‘ನೀವು’ ಎಂದು ಪದಬಳಕೆ ಮಾಡುತ್ತಿದ್ದೇನೆ. ನಿಮಗೆ ಬೇರೆ ಭಾಷೆಯ ಮಾತಿನಲ್ಲೇ ಅರ್ಥವಾಗುತ್ತದೆ ಎಂದಾದರೆ, ನನ್ನ ಮೈಯಲ್ಲೂ ಅಂಬೇಡ್ಕರ್ ರಕ್ತ ಹರಿಯುತ್ತಿದೆ ಎಂಬುದನ್ನು ಮರೆಯಬೇಡಿ’ ಎಂದು ಸಚಿವ ಪ್ರಿಯಾಂಕ್ ಎಚ್ಚರಿಸಿದರು.
ಇದಕ್ಕೂ ಮುನ್ನ ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ‘100 ಕೇಸ್ ಹಾಕಿದ್ರೂ ಹೆದರಲ್ಲ’ ಎಂಬ ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಸಚಿವ ಪ್ರಿಯಾಂಕ್, ‘ಹೆದರದಿದ್ದರೆ ಬಿಟ್ಟು ಬಿಡಿ. ಪದೇ ಪದೇ ಬಂದು ಹೆದರುವುದಿಲ್ಲ ಎಂದು ಹೇಳುವುದೇಕೆ? ನೀವು ಒಬ್ಬ ಮಾಜಿ ಡಿಸಿಎಂ ಆಗಿ ಯಾರೋ ಏನೋ ಮಾತನಾಡಿದರೆ, ಗುಂಡು ಹಾಕಿ ಹೊಡೆಯುವಂಥ ಕಾನೂನು ತರಬೇಕು ಅಂತ ಹೇಳಿದರೆ, ನಿಮ್ಮಲ್ಲಿ ಎಷ್ಟು ವಿವೇಕತನ ಇದೆ ಎಂಬುದನ್ನು ತೋರಿಸುತ್ತದೆ’ ಎಂದು ಟೀಕಿಸಿದ್ದರು.
ಮುಂದೆಯೂ ದಾಳಿ ನಡೆಯುತ್ತೆ...
‘ಸಿಬಿಐ, ಐಟಿ, ಇಡಿ ಇವೆರಲ್ಲರೂ ಬಿಜೆಪಿಯ ಸ್ಟಾರ್ ಪ್ರಚಾರಕರು. ಬಿಜೆಪಿಯವರು ನೇರವಾಗಿ ಚುನಾವಣೆ ಎದುರಿಸುವ ಅವಕಾಶವೇ ಇಲ್ಲ. ಇಡೀ ದೇಶದಲ್ಲಿ ನೋಡಿ ಶೇ 99ರಷ್ಟು ದಾಳಿಗಳು ನಡೆದಿರುವುದು ವಿರೋಧ ಪಕ್ಷದವರ ಮೇಲೆ. ಡಿ.ಕೆ.ಶಿವಕುಮಾರ್ ಸೇರಿದಂತೆ ಯಾವುದೇ ಪ್ರಕರಣದಲ್ಲೂ ಈತನಕ ಆರೋಪ ಸಾಬೀತು ಕೂಡ ಆಗಿಲ್ಲ. ಇದು ಮುಂದೆಯೂ ನಡೆಯುತ್ತದೆ, ಅದರಲ್ಲಿ ಆಶ್ಚರ್ಯವೇನೂ ಇಲ್ಲ. ಐಟಿ, ಇ.ಡಿ ದಾಳಿಗೆ ನಾವು ಬಗ್ಗುವವರಲ್ಲ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರ ಮನೆ–ಕಚೇರಿ ಮೇಲಿನ ಜಾರಿ ನಿರ್ದೇಶನಾಲಯದ ದಾಳಿಗೆ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.