ಬೆಂಗಳೂರು: ಬೆಳಗಾವಿಯಲ್ಲಿ ನಡೆಯುವ ವಿಧಾನಮಂಡಲದ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಎಲ್ಲ ವಿಷಯಗಳಲ್ಲೂ ಜಂಟಿಯಾಗಿ ಹೋರಾಟ ನಡೆಸಲು ಬಿಜೆಪಿ ಮತ್ತು ಜೆಡಿಎಸ್ ತೀರ್ಮಾನಿಸಿವೆ.
ಈ ಸಂಬಂಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ಅನೌಪಚಾರಿಕವಾಗಿ ಸಭೆ ನಡೆಸಿ, ಈ ಕುರಿತು ಚರ್ಚೆ ನಡೆಸಿದರು.
ಬರ ಮತ್ತು ರೈತರಿಗೆ ಪರಿಹಾರ ನೀಡದೇ ಕಾಲ ಹರಣ ಮಾಡುತ್ತಿರುವ ಸರ್ಕಾರದ ವಿರುದ್ಧ ನಿಲುವಳಿ ಸೂಚನೆ ಮಂಡಿಸಲಾಗುವುದು. ಅಲ್ಲದೇ, ಈ ಸರ್ಕಾರದ ಹಲವು ಹಗರಣಗಳ ಬಗ್ಗೆಯೂ ವಿಧಾನಮಂಡಲದಲ್ಲಿ ಪ್ರಸ್ತಾಪಿಸಲಾಗುವುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಕೆಲವು ವಿಷಯಗಳನ್ನು ಜೆಡಿಎಸ್ ಹಾಗೂ ಮತ್ತೆ ಕೆಲವು ವಿಷಯಗಳನ್ನು ಬಿಜೆಪಿ ಪ್ರಸ್ತಾಪಿಸುತ್ತದೆ. ಪರಸ್ಪರ ಸಹಕಾರದ ಮೂಲಕ ಸರ್ಕಾರವನ್ನು ಕಟ್ಟಿ ಹಾಕುವ ಕೆಲಸ ಮಾಡಲಾಗುವುದು. ಅಧಿವೇಶನ ಆರಂಭವಾದ ಮೇಲೆ ಎರಡೂ ಪಕ್ಷಗಳ ಶಾಸಕರ ಜಂಟಿ ಸಭೆ ಕರೆಯುವ ಆಲೋಚನೆಯೂ ಇದೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದರು.