ಬೆಂಗಳೂರು: ‘ದ್ವೇಷ ಭಾಷಣ ಮಸೂದೆಯ ಅಡಿ ಬಿಜೆಪಿ ಮುಖಂಡ ವಿಕಾಸ್ ಪುತ್ತೂರು ಅವರಿಗೆ ಪೊಲೀಸರು ನೋಟಿಸ್ ನೀಡಿದ್ದು ತಪ್ಪು’ ಎಂದು ಗೃಹ ಸಚಿವ ಪರಮೇಶ್ವರ ಹೇಳಿದರು. ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು ‘ಈ ವಿಚಾರವಾಗಿ ಮಾಹಿತಿ ಪಡೆದು ಪರಿಶೀಲಿಸುತ್ತೇನೆ’ ಎಂದರು. ‘ಈ ಮಸೂದೆಗೆ ರಾಜ್ಯಪಾಲರು ಇನ್ನೂ ಅಂಕಿತ ಹಾಕಿಲ್ಲ. ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿ ನೋಟಿಸ್ ನೀಡಲು ಅವಕಾಶವಿದೆ. ಇನ್ನೂ ಕಾಯ್ದೆಯಾಗಿ ಜಾರಿಯಾಗದ ಕಾರಣ ಈ ಮಸೂದೆಯ ಅಡಿ ನೋಟಿಸ್ ನೀಡಿರುವುದು ತಪ್ಪು. ಪೊಲೀಸರು ಯಾಕೆ ಈ ರೀತಿ ಮಾಡಿದ್ದಾರೆ ಎನ್ನುವುದನ್ನು ನೋಡಬೇಕು’ ಎಂದೂ ಹೇಳಿದರು.