ಬೆಂಗಳೂರು: ಬಿಜೆಪಿಯನ್ನು ತೊರೆದಿದ್ದು ಇದೇ 13ಕ್ಕೆ ಕಾಂಗ್ರೆಸ್ ಪಕ್ಷ ಸೇರುವುದಾಗಿ ಮಾಜಿ ಶಾಸಕ ರಾಜು ಕಾಗೆ ಸೋಮವಾರ ತಿಳಿಸಿದ್ದಾರೆ.
ಈಗಾಗಲೇ ಕಾಂಗ್ರೆಸ್ ಪಕ್ಷದ ನಾಯಕರಾದ ಡಿ.ಕೆ.ಶಿವಕುಮಾರ್, ದಿನೇಶ್ ಗುಂಡೂರಾವ್ ಹಾಗೂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ ಅವರು ಪಕ್ಷದಿಂದ ಟಿಕೆಟ್ ಕೊಡುವ ಭರವಸೆ ನೀಡಿದ್ದಾರೆ ಎಂದು ರಾಜು ಕಾಗೆ ಹೇಳಿದ್ದಾರೆ.
ಜೆಡಿಎಸ್ ನಾಯಕರಾದ ಕುಮಾರಸ್ವಾಮಿ ನನ್ನ ಉತ್ತಮ ಸ್ನೇಹಿತರು ಅವರನ್ನು ಭೇಟಿ ಮಾಡಿ ಬೆಂಬಲ ನೀಡುವಂತೆ ಮನವಿ ಮಾಡುತ್ತೇನೆ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪ ನನ್ನ ಜೊತೆ ಮಾತನಾಡಿ ಸುಮ್ಮನಿರುವಂತೆ ಹೇಳಿದ್ದರು ಅದಕ್ಕೆ ಒಪ್ಪಿಕೊಂಡಿದ್ದೆ ಮತ್ತೆ ಅವರು ಶ್ರೀಮಂತ ಪಾಟೀಲ್ ಅವರನ್ನು ಗೆಲ್ಲಿಸಬೇಕು ಎಂದು ಹೇಳಿದರು, ಇದಕ್ಕೆ ನಾನು ಆಗೋದಿಲ್ಲ ಎಂದು ಹೇಳಿ ಪಕ್ಷದಿಂದ ಹೊರ ಬಂದಿದ್ದೇನೆ ಎಂದು ಕಾಗೆ ಹೇಳಿದರು.
ನಾಳೆ ಪಕ್ಷದ ಕಚೇರಿಗೆ ರಾಜೀನಾಮೆ ಪತ್ರವನ್ನು ಕಳುಹಿಸಿಕೊಡುತ್ತೇನೆ ಎಂದರು.