ಬೆಂಗಳೂರು: ‘ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವಾದ ಇದೇ 15ರಂದು ಎಲ್ಲ ಶಾಲೆ ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಸಂವಿಧಾನ ಪೀಠಿಕೆ ಓದುವಿಕೆ ಹಮ್ಮಿಕೊಳ್ಳಲಾಗಿದೆ’ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂವಿಧಾನದ ಉದ್ದೇಶವನ್ನು ಮಕ್ಕಳಿಗೆ ಅರ್ಥ ಮಾಡಿಸಬೇಕೆಂಬ ಕಾರಣಕ್ಕೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.
‘ನಾವೇ ಒಪ್ಪಿ ನಾವೇ ಸಂವಿಧಾನವನ್ನು ಜಾರಿಗೆ ತಂದಿದ್ದೇವೆ. ಅದರಲ್ಲಿರುವ ಅಂಶಗಳು ಮುಂದಿನ ಪೀಳಿಗೆಗೂ ಅರ್ಥ ಆಗಬೇಕು. ಜಾತಿ, ಧರ್ಮಗಳ ನಡುವೆ ಸಂಘರ್ಷ ತಪ್ಪಿಸಿ ಎಲ್ಲರೂ ಸೋದರತೆಯಿಂದ ಬಾಳಲು ಸಂವಿಧಾನದ ಆಶಯ ಪೂರಕವಾಗಿದೆ’ ಎಂದರು.
‘ಮೂಲಭೂತ ಹಕ್ಕುಗಳು ಎಲ್ಲರಿಗೂ ಗೊತ್ತಿವೆ. ಆದರೆ, ಆ ಕರ್ತವ್ಯಗಳನ್ನು ಯಾರೂ ಪಾಲಿಸುತ್ತಿಲ್ಲ. ಹೀಗಾಗಿ, ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಸಂವಿಧಾನ ಪೀಠಿಕೆ ಓದುವಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಎರಡು ಕೋಟಿ ಜನರು ಹೆಸರು ನೋಂದಾಯಿಸಿದ್ದಾರೆ. ಇದು ಆಂದೋಲನ ಆಗಬೇಕು ಎನ್ನುವುದು ನಮ್ಮ ಆಶಯ’ ಎಂದೂ ಹೇಳಿದರು.
‘ಕೇವಲ ಶಾಲಾ ಕಾಲೇಜಿಗೆ ಮಾತ್ರ ಸಂವಿಧಾನ ಪೀಠಿಕೆ ಓದುವಿಕೆ ಅನ್ವಯ ಅಲ್ಲ. ಸರ್ಕಾರಿ ಕಚೇರಿಗಳಿಗೂ ಅನ್ವಯವಾಗಲಿದೆ. ಮುಖ್ಯಮಂತ್ರಿ ಕಚೇರಿಯಲ್ಲೂ ಇದನ್ನು ಓದಬೇಕು. ಸಂವಿಧಾನದಲ್ಲಿ ಎಲ್ಲರೂ ಸಮಾನರೇ. ಯಾರು ಕಡಿಮೆ ಅಲ್ಲ. ಯಾರೂ ಹೆಚ್ಚು ಅಲ್ಲ’ ಎಂದೂ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.