ವಿಜಯನಗರ (ಹೊಸಪೇಟೆ): ತುಂಗಭದ್ರಾ ಜಲಾಶಯದ ಕೆಳಮಟ್ಟದ ಕಾಲುವೆಗೆ (ಎಲ್ಎಲ್ಸಿ) ಏಪ್ರಿಲ್ 10ರ ವರೆಗೆ ನೀರು ಹರಿಸಬೇಕೆಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಜಿ. ಪುರುಷೋತ್ತಮಗೌಡ ಆಗ್ರಹಿಸಿದ್ದಾರೆ.
ಈ ಸಂಬಂಧ ಅವರು ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಖಾತೆ ಸಚಿವ ಆನಂದ್ ಸಿಂಗ್, ತುಂಗಭದ್ರಾ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಮಂಜಪ್ಪ ಪವಾರ್, ವಿಜಯನಗರ ಜಿಲ್ಲೆ ವಿಶೇಷ ಅಧಿಕಾರಿ ಪಿ. ಅನಿರುದ್ಧ ಶ್ರವಣ್ ಅವರಿಗೆ ಸೋಮವಾರ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಕಂಪ್ಲಿ, ಕುರುಗೋಡು, ಸಿರುಗುಪ್ಪ, ಬಳ್ಳಾರಿ ಗ್ರಾಮಾಂತರ ರೈತರು ಭತ್ತ ಬೆಳೆದಿದ್ದಾರೆ. ಈ ವರ್ಷ ಪ್ರತಿಕೂಲ ವಾತಾವರಣದಿಂದ ಬೆಳೆ ತಡವಾಗಿ ಬರಲಿದೆ. ಏ. 10ರ ವರೆಗೆ ಬೆಳೆಗೆ ನೀರು ಹರಿಸುವುದು ಅಗತ್ಯ. ಅಲ್ಲಿಯವರೆಗೆ ನೀರು ಹರಿಸಿ ಬೆಳೆ ಉಳಿಸಬೇಕು ಎಂದು ಹಕ್ಕೊತ್ತಾಯ ಮಾಡಿದ್ದಾರೆ.