ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಸಕರ ವೇತನ ಪರಿಷ್ಕರಣೆಗೂ ಆಯೋಗ ರಚಿಸಿ: ಅರವಿಂದ ಬೆಲ್ಲದ

Published 4 ಜನವರಿ 2024, 13:09 IST
Last Updated 4 ಜನವರಿ 2024, 13:09 IST
ಅಕ್ಷರ ಗಾತ್ರ

ಧಾರವಾಡ: ‘ಶಾಸಕರ ಪಗಾರವನ್ನು ಶಾಸಕರೇ ಹೆಚ್ಚಿಸಿಕೊಳ್ಳುವುದು ತಪ್ಪು. ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ವೇತನ ಆಯೋಗ ರಚಿಸುವಂತೆ ಶಾಸಕರ ವೇತನ ಪರಿಷ್ಕರಣೆಗೂ ಆಯೋಗ ರಚಿಸಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.

ಧಾರವಾಡ ಜರ್ನಲಿಸ್ಟ್‌ ಗಿಲ್ಡ್‌ ವತಿಯಿಂದ ನಗರದ ಪತ್ರಿಕಾಭವನದಲ್ಲಿ ಗುರುವಾರ ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು. ‘ಇರುವಂಥ ವೇತನದಲ್ಲಿ ಎಲ್ಲ (ಕಚೇರಿ, ವಾಹನ, ಚಾಲಕ...) ನಿರ್ವಹಣೆ ಸಾಧ್ಯ ಇಲ್ಲ ಎಂದು ಎಲ್ಲ ಶಾಸಕರಿಗೂ ಗೊತ್ತಿದೆ. ಶಾಸಕರಿಗೆ ಏನೇನು ಖರ್ಚುಗಳು ಇರುತ್ತವೆ, ಖರ್ಚು ನಿಭಾಯಿಸಲು ಸರ್ಕಾರದಿಂದ ಏನು ವ್ಯವಸ್ಥೆ ಮಾಡಬೇಕು, ಶಾಸಕರ ಆಪ್ತ ಸಹಾಯಕರ ಪಗಾರ, ಅವರ ಪ್ರವಾಸ ಭತ್ಯೆ ಇತ್ಯಾದಿ ಯಾರು ನೀಡಬೇಕು ಇತ್ಯಾದಿ ಕುರಿತು ಆಯೋಗವು ಪರಿಶೀಲಿಸಿ ನಿರ್ಧಾರ ಕೈಗೊಳ್ಳುತ್ತದೆ’ ಎಂದರು.

‘ಜಿಲ್ಲಾಧಿಕಾರಿ ಸಹಿತ ವಿವಿಧ ಅಧಿಕಾರಿಗಳಿಗೆ (ಎ.ಡಿ.ಸಿ, ಎ.ಸಿ, ತಹಶೀಲ್ದಾರ್‌...) ಕಚೇರಿ, ವಾಹನ, ಮನೆ ಎಲ್ಲ ಸೌಲಭ್ಯ ಇರುತ್ತದೆ. ಶಾಸಕರಿಗೆ ವಾಹನ ಸೌಲಭ್ಯ ಇಲ್ಲ. ಶಾಸಕ ಬಸ್‌ನಲ್ಲಿ ಎಲ್ಲ ಕಡೆ ಓಡಾಡಿ ಕೆಲಸ ಮಾಡಲು ಆಗುತ್ತದೆಯೇ?, ಶಾಸಕರ ಆಪ್ತ ಸಹಾಯಕರ ಸಂಬಳ ಯಾರು ಪಾವತಿಸುವುದು. ಆಡಳಿತದಲ್ಲಿ ಬಹಳಷ್ಟು ಸುಧಾರಣೆಗಳು ಆಗಬೇಕಿದೆ’ ಎಂದು ಹೇಳಿದರು.

‘1992ರಲ್ಲಿ ಹುಬ್ಬಳ್ಳಿ ನಗರದಲ್ಲಿ ನಡೆದ ಗಲಭೆ ಪ್ರಕರಣದ ಆರೋಪಿ ಶ್ರೀಕಾಂತ ಪೂಜಾರಿ ಬಂಧಿಸಿರುವುದು ರಾಮಮಂದಿರ ಕರಸೇವೆ ಪ್ರಕರಣದಲ್ಲಿ. ಅದಕ್ಕೆ ನಾವು ಖಂಡನೆ ವ್ಯಕ್ತಪಡಿಸಿದೆವು. ಶ್ರೀಕಾಂತ ವಿರುದ್ಧದ ಬೇರೆ ಪ್ರಕರಣಗಳಿಗೆ ಸಂಬಂಧಿಸಿದಂತೆ ನಾವು ಮಾತಾಡಿಲ್ಲ, ಕ್ರಮ ಜರುಗಿಸುವುದಕ್ಕೆ ನಮ್ಮ ಆಕ್ಷೇಪ ಇಲ್ಲ’ ಎಂದು ಅವರು ಉತ್ತರಿಸಿದರು.

‘ಶ್ರೀಕಾಂತ್‌ ಅವರ ಮನೆಗೆ ಭೇಟಿ ನೀಡಿದ್ದೆವು. ಶ್ರೀಕಾಂತ್‌ ಮನೆ ಪಕ್ಕದವರೊಬ್ಬರು (ವೃದ್ಧ) ಈ ಪ್ರಕರಣದಲ್ಲಿಇದ್ದರು. ಪೊಲೀಸರು ಆ ವೃದ್ಧನನ್ನು ಬಿಟ್ಟು ಶ್ರೀಕಾಂತ್‌ನನ್ನು ಕರೆತಂದಿರುವುದು ನಮಗೆ ಗೊತ್ತಾಯಿತು. ಶ್ರೀಕಾಂತನನ್ನು ಗುರಿಯಾಗಿಸಿಕೊಂಡು ಬಂಧಿಸಿದ್ದಾರೆ’ ಎಂದು ಅವರು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT