ಅಂಕೋಲಾ: ‘ಶಿರೂರು ಶ್ರೀಗಳ ಸಾವು ಪ್ರಕರಣದಲ್ಲಿ ರಮ್ಯಾ ಶೆಟ್ಟಿಯನ್ನು ಅಪರಾಧಿ ಎಂಬಂತೆ ಬಿಂಬಿಸಲಾಗಿದೆ; ಆದರೆ, ಹೆಣ್ಣಾಗಿ, ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ಕೊಯ್ದು ಹಾಕುವಷ್ಟು ದಡ್ಡಿ ಅವಳಲ್ಲ!’ ಎಂದು ಬಾರ್ಕೂರು ಮಹಾಸಂಸ್ಥಾನದ ಪೀಠಾಧಿಪತಿ ಸಂತೋಷ ಭಾರತಿ ಗುರೂಜಿ ಹೇಳಿದರು.
ತಾಲ್ಲೂಕಿನ ಬಾಸ್ಗೋಡದಲ್ಲಿ ‘ಪಹರೆ ವೇದಿಕೆ’ ಹಮ್ಮಿಕೊಂಡಿದ್ದ ‘ಕೃಷಿ ಹಬ್ಬ’ದಲ್ಲಿ ಪಾಲ್ಗೊಳ್ಳಲು ಬಂದಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
‘ಶ್ರೀಗಳು ವಿಧಿವಶರಾದ ಬಳಿಕವೂ ಅವರ ಮೇಲಿನ ಹಗೆತನ ಕಡಿಮೆಯಾಗಿಲ್ಲ. ಹೀಗಾಗಿ, ಶ್ರೀಗಳ ಸಾವಿಗೆ ಬೇರೆಯೇ ಕಾರಣವಿದೆ ಎನ್ನುವುದು ಸ್ಪಷ್ಟ’ ಎಂದರು.
ಶಿರೂರು ಶ್ರೀಗಳು ಸ್ವಾಮೀಜಿಯೇ ಅಲ್ಲ ಎನ್ನುವ ಪೇಜಾವರ ಶ್ರೀಗಳ ಹೇಳಿಕೆಯನ್ನು ತಾವು ಒಪ್ಪುವುದಿಲ್ಲ ಎಂದ ಅವರು, ‘ಶ್ರೀಗಳು ಬದುಕಿದ್ದಾಗಲೇ ಇಂಥ ಆರೋಪಗಳನ್ನು ಯಾಕೆ ಮಾಡಲಿಲ್ಲ?’ ಎಂದು ಪ್ರಶ್ನಿಸಿದರು.
‘ಶಿರೂರು ಮಠದ ಲಕ್ಷ್ಮೀವರತೀರ್ಥರು ಮದ್ಯವ್ಯಸನಿಯಾಗಿದ್ದರು; ಮಠದಲ್ಲಿ ₹ 4.5 ಲಕ್ಷ ಮೌಲ್ಯದ ಮದ್ಯ ಪತ್ತೆಯಾಗಿದೆ ಎಂಬ ಆರೋಪಗಳು ಅಸಂಬದ್ಧ. ಒಬ್ಬ ವ್ಯಕ್ತಿ ಇಷ್ಟು ಮೌಲ್ಯದ ಮದ್ಯ ಕುಡಿಯಲು ಸಾಧ್ಯವೇ?’ ಎಂದೂ ಕೇಳಿದರು.