ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲಿ ಕೌಶಲಾಭಿವೃದ್ಧಿ ವಿಶ್ವವಿದ್ಯಾನಿಲಯ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ನಾಡಪ್ರಭು ಕೆಂಪೇಗೌಡ ಜಯಂತಿಯ ಅಂಗವಾಗಿ ನಗರದ ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಿರುದ್ಯೋಗ ಸಮಸ್ಯೆ ಬಹುದೊಡ್ಡ ಸಮಸ್ಯೆಯಾಗಿದೆ. ಈ ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದರಿಂದ ಸಾಕಷ್ಟು ಯುವಕರು ಉದ್ಯೋಗ ಪಡೆಯಲು ಸಾಧ್ಯವಾಗುತ್ತದೆ. ಕುಟುಂಬಗಳು ನೆಮ್ಮದಿಯ ನೆರಳು ಕಾಣಲು ಸಾಧ್ಯವೆಂದು ಅವರು ಹೇಳಿದರು.
ರಾಜ್ಯದ ಒಟ್ಟಾರೆ ಆದಾಯದಲ್ಲಿ ಶೇ. 60 ರಿಂದ 65 ರಷ್ಟು ಬೆಂಗಳೂರಿನಿಂದಲೇ ಬರುತ್ತಿದ್ದು, ಇದನ್ನು ರಾಜ್ಯದ ಅಭಿವೃದ್ಧಿಗೇ ಬಳಸಲಾಗುತ್ತಿದೆ. ರಾಜ್ಯಾದ್ಯಂತ ಕೆಂಪೇಗೌಡ ಅವರ ಜಯಂತಿ ಆಚರಿಸಲಾಗುವುದು. ಕೆಂಪೇಗೌಡ ಅವರ ಭವನ ನಿರ್ಮಾಣ ಮಾಡುವ ಆಲೋಚನೆ ಇದೆ. ಅದಕ್ಕಾಗಿ ಹಣ ಮೀಸಲಿಡಲಾಗುವುದು ಎಂದೂ ತಿಳಿಸಿದರು.