ಚೆನ್ನೈ : ನಿಗದಿತ ಸಮಯದಲ್ಲಿ ವೀಸಾ ದೊರೆಯದ ಕಾರಣ ಭಾರತದ ಐವರು ಸ್ಪರ್ಧಿಗಳು ಮೆಕ್ಸಿಕೊ ಸಿಟಿಯಲ್ಲಿ ನಡೆಯಲಿರುವ ಫಿಡೆ ವಿಶ್ವ ಜೂನಿಯರ್ ಚೆಸ್ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಳ್ಳುವ ಅವಕಾಶ ಕಳೆದುಕೊಂಡಿದ್ದಾರೆ.
ಸೆ.22 ರಿಂದ ಅ.2 ರ ವರೆಗೆ ನಡೆಯುವ ಟೂರ್ನಿಗೆ ಭಾರತದ 12 ಸ್ಪರ್ಧಿಗಳು ತೆರಳಬೇಕಿತ್ತು. ಆದರೆ ಐವರನ್ನು ಹೊರತುಪಡಿಸಿ, ಇನ್ನುಳಿದ ಏಳು ಮಂದಿ ಮಂಗಳವಾರ ಬೆಳಿಗ್ಗೆ ಮೆಕ್ಸೊಕೊಗೆ ಪ್ರಯಾಣ ಬೆಳೆಸಿದ್ದಾರೆ.
ವೃಶಾಂಕ್ ಚೌಹಾನ್, ಅರುಣ್ ಕಟಾರಿಯ, ಭಾಗ್ಯಶ್ರೀ ಪಾಟೀಲ್, ಪ್ರಣೀತ್ ವಿ., ಫೆಮಿಲ್ ಚೆಲ್ಲದುರೈ ಮತ್ತು ಕೋಚ್ಗಳಾದ ಪ್ರವೀಣ್ ತಿಪ್ಸೆ ಹಾಗೂ ಕಿರಣ್ ಅಗರವಾಲ್ ಅವರಿಗೆ ವೀಸಾ ಲಭಿಸಿಲ್ಲ.
ಇದರಿಂದ ಕೋಚ್ಗಳನ್ನು ಕೊನೆಯ ಕ್ಷಣದಲ್ಲಿ ಬದಲಿಸಲಾಗಿದ್ದು, ಮೆಕ್ಸಿಕೊ ವೀಸಾ ಹೊಂದಿದ್ದ ಸಿಆರ್ಜಿ ಕೃಷ್ಣ ಮತ್ತು ತಾರಿಣಿ ಗೋಯಲ್ ಅವರು ತಂಡದ ಜತೆ ತೆರಳಿದ್ದಾರೆ.
ಇದೀಗ ಬಾಲಕಿಯರ ವಿಭಾಗದಲ್ಲಿ ರಕ್ಷಿತಾ ರವಿ, ಬಿ.ಮೌನಿಕಾ ಅಕ್ಷಯಾ, ಅಮೂಲ್ಯ ಗುರುಪ್ರಸಾದ್ ಹಾಗೂ ಬಾಲಕರ ವಿಭಾಗದಲ್ಲಿ ಹರ್ಷವರ್ಧನ್ ಜಿ.ಬಿ., ಪ್ರಣವ್ ಆನಂದ್, ದುಷ್ಯಂತ್ ಶರ್ಮಾ ಮತ್ತು ವಿಘ್ನೇಶ್ ಬಿ. ಅವರು ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ. ಇದೇ ಟೂರ್ನಿ ಕಳೆದ ವರ್ಷ ಇಟಲಿಯಲ್ಲಿ ನಡೆದಿದ್ದಾಗ ಭಾರತದ 13 ಸ್ಪರ್ಧಿಗಳು ಪಾಲ್ಗೊಂಡಿದ್ದರು.
‘ವೀಸಾ ಪಡೆಯಲು ಅಗತ್ಯವಿದ್ದ ಎಲ್ಲ ದಾಖಲೆಗಳನ್ನು ನೀಡಿದ್ದರೂ, ಐವರಿಗೆ ವೀಸಾ ದೊರೆಯಲಿಲ್ಲ. ಇದರ ಹಿಂದಿನ ಕಾರಣ ಏನೆಂಬುದು ಸ್ಪಷ್ಟವಿಲ್ಲ. ನಮ್ಮ ಕಡೆಯಿಂದ ಸಾಧ್ಯವಿದ್ದ ಎಲ್ಲ ಪ್ರಯತ್ನಗಳನ್ನೂ ಮಾಡಿದ್ದೇವೆ’ ಎಂದು ಫಿಡೆ ಸಲಹಾ ಮಂಡಳಿ ಚೇರ್ಮನ್ ಭರತ್ ಸಿಂಗ್ ಚೌಹಾನ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.