ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಾಕಿಸ್ತಾನ ಪರ ಬೇಹುಗಾರಿಕೆ: ಮೈಸೂರಿನಲ್ಲಿ ಆರೋಪಿ ಬಂಧನ

Published 15 ಮೇ 2024, 16:27 IST
Last Updated 15 ಮೇ 2024, 16:27 IST
ಅಕ್ಷರ ಗಾತ್ರ

ಮೈಸೂರು: ಬೇಹುಗಾರಿಕೆ ಪ್ರಕರಣದಲ್ಲಿ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ನೂರುದ್ದೀನ್‌ ಅಲಿಯಾಸ್‌ ರಫಿ ಎಂಬುವರನ್ನು ಎನ್‌ಐಎ ಅಧಿಕಾರಿಗಳು ನಗರದ ರಾಜೀವ್‌ ನಗರದಲ್ಲಿ ಬುಧವಾರ ಬಂಧಿಸಿದ್ದಾರೆ. 

ಆರೋಪಿಯ ಮನೆಯಲ್ಲಿ ಮೊಬೈಲ್‌ ಫೋನ್‌, ಪೆನ್‌ಡ್ರೈವ್‌, ಡ್ರೋನ್‌ ಮೊದಲಾದವು ಪತ್ತೆಯಾಗಿವೆ ಎಂದು ಎನ್‌ಐಎ ತಿಳಿಸಿದೆ.

ಬೆಂಗಳೂರಿನ ಇಸ್ರೇಲ್‌ ಹಾಗೂ ಚೆನ್ನೈನ ಅಮೆರಿಕ ರಾಯಭಾರ ಕಚೇರಿಗಳ ಮೇಲೆ ಸ್ಫೋಟಕ್ಕೆ ಸಂಚು ರೂಪಿಸಿದ ಆರೋಪದ ಮೇಲೆ ಶ್ರೀಲಂಕಾ ಪ್ರಜೆ ಮೊಹಮ್ಮದ್‌ ಸಕೀರ್‌ ಹುಸೇನ್‌ ಹಾಗೂ ಕೊಲಂಬೊದ ಪಾಕಿಸ್ತಾನದ ರಾಜತಾಂತ್ರಿಕ ಕಚೇರಿ ನೌಕರರಾಗಿರುವ ಪಾಕಿಸ್ತಾನದ ಪ್ರಜೆ ಅಮೀರ್‌ ಜುಬೇರ್‌ ಸಿದ್ದಿಕಿ ಅವರನ್ನು 2014ರಲ್ಲಿ ಬಂಧಿಸಿ ಎನ್‌ಐಎ ಪ್ರಕರಣ ದಾಖಲಿಸಿತ್ತು. ಈ ಆರೋಪಿಗಳಿಗೆ ಭಾರತದ ನಕಲಿ ನೋಟು ‍ಪೂರೈಸುವ ಮೂಲಕ ಭಯೋತ್ಪಾದಕ ಕೃತ್ಯಕ್ಕೆ ಸಹಕರಿಸಿದ ಆರೋಪದಲ್ಲಿ ನೂರುದ್ದೀನ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಿತ್ತು.

2023ರ ಆಗಸ್ಟ್‌ನಲ್ಲಿ ಆರೋಪಿಯು ಜಾಮೀನಿನ ಮೇಲೆ ಹೊರಬಂದಿದ್ದು, ನಂತರ ಚೆನ್ನೈನ ಎನ್‌ಐಎ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗದೆ ತಲೆಮರೆಸಿಕೊಂಡಿದ್ದರು.

‘ಆರೋಪಿ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ವಾರಂಟ್‌ ಹೊರಡಿಸಿತ್ತು. ನೂರುದ್ದೀನ್‌ ನಾಪತ್ತೆ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ವಿಚಾರಣೆಯನ್ನು ಈಗ ಮುಂದುವರಿಸಲಾಗುವುದು’ ಎಂದು ಎನ್‌ಐಎ ‘ಎಕ್ಸ್‌’ನಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT