ಬೆಂಗಳೂರು: ಸರ್ಕಾರಿ ಆಯುಷ್ ವೈದ್ಯರ ವೇತನ ಹೆಚ್ಚಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದ ಆಯುಷ್ ಇಲಾಖೆ ವೈದ್ಯರು ಮತ್ತು ಸಿಬ್ಬಂದಿ ಜತೆ ಮಾತುಕತೆಯ ಬಳಿಕ ಈ ವಿಷಯ ತಿಳಿಸಿದರು.
ಮಾತುಕತೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂದಕ್ಕೆ ಪಡೆಯುವಂತೆ ಅವರು ಮನವಿ ಮಾಡಿದರು.
ಅಲೋಪತಿ ಗುತ್ತಿಗೆ ವೈದ್ಯರಿಗೆ ಯಾವ ಆಧಾರದಲ್ಲಿ ವೇತನ ಹೆಚ್ಚಿಸಲಾಗಿದೆಯೋ ಅದೇ ಮಾನದಂಡದ ಆಧಾರದ ಮೇಲೆ ಆಯುಷ್ ವೈದ್ಯರ ವೇತನ ಹೆಚ್ಚಿಸಲಾಗುವುದು. ಈ ಬಗ್ಗೆಆರ್ಥಿಕ ಇಲಾಖೆಗೆ ತಕ್ಷಣವೇ ಕಡತ ಸಲ್ಲಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಆಯುಷ್ ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಹೆಚ್ಚಿಸಲು ಮತ್ತು ವಿಶೇಷ ನೇಮಕಾತಿ ಮೂಲಕ ಆಯುಷ್ ವೈದ್ಯರ ನೇಮಕ ಮಾಡುವುದಾಗಿಯೂ ಅವರು ಭರವಸೆ ನೀಡಿದರು.