ಬೆಂಗಳೂರು: ಪಕ್ಷದ ವಿರುದ್ಧ ಅಸಮಾಧಾನಗೊಂಡಿದ್ದ ಶಾಸಕ ರಮೇಶ ಜಾರಕಿಹೊಳಿ ನಿವಾಸಕ್ಕೆ ಗುರುವಾರ ಭೇಟಿ ನೀಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಅವರನ್ನು ಸಮಾಧಾನ ಪಡಿಸುವ ಯತ್ನ ಮಾಡಿದರು.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ವಿಜಯೇಂದ್ರ, 'ತಮ್ಮ ಸಣ್ಣ ಪುಟ್ಟ ನೋವು, ಅಸಮಾಧಾನಗಳನ್ನು ಜಾರಕಿಹೊಳಿ ಹೇಳಿಕೊಂಡಿದ್ದಾರೆ. ವರಿಷ್ಠರಿಗೆ ಸಂಬಂಧಿಸಿದ ಅಭಿಪ್ರಾಯಗಳನ್ನು ಹೇಳಿದ್ದಾರೆ. ನಾನು ಹೇಳಿದ ಮಾತುಗಳಿಂದ ಅವರಿಗೆ ಸಮಾಧಾನವಾಗಿದೆ ಎಂದುಕೊಂಡಿದ್ದೇನೆ' ಎಂದರು.
'ವಿಜಯೇಂದ್ರ-ಅಶೋಕ ಹೊಂದಾಣಿಕೆ ರಾಜಕಾರಣ ಮಾಡುವ ಕಾರಣಕ್ಕೆ ಅವರಿಗೆ ಸ್ಥಾನ ಸಿಕ್ಕಿದೆ' ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿಕೆ ಪ್ರತಿಕ್ರಿಯಸಲು ಬಯಸದ ವಿಜಯೇಂದ್ರ, ಪಕ್ಷದ ಹಿರಿಯರು ತಮ್ಮ ಭಾವನೆಗಳನ್ನು ಅವರದೇ ಧಾಟಿಯಲ್ಲಿ ಹೇಳುತ್ತಾರೆ. ಮಾತನಾಡುವುದೇ ಕೆಲಸವಲ್ಲ, ಕೆಲಸ ಮಾಡಿ ತೋರಿಸಬೇಕು ಎಂಬುದು ತಮ್ಮ ನಿಲುವು. ಎಲ್ಲರನ್ನೂ ಒಗ್ಗೂಡಿಸಿ ವರಿಷ್ಠರು ವಹಿಸಿದ ಕೆಲಸವನ್ನಷ್ಟೇ ಮಾಡುವುದು ತಮ್ಮ ಆದ್ಯತೆ ಎಂದರು.