‘ಬೆಳಗಾವಿ, ಬೀದರ್, ಕಲಬುರ್ಗಿ, ಉತ್ತರ ಕನ್ನಡ ಜಿಲ್ಲೆಗಳ ಒಟ್ಟು 865 ಜನವಸತಿಗಳು ತಮಗೆ ಸೇರಬೇಕು ಎಂಬುದು ಮಹಾರಾಷ್ಟ್ರದ ವಾದ. ಇದನ್ನು ಪ್ರತಿಪಾದಿಸಲು ಸುಪ್ರೀಂ ಕೋರ್ಟ್ನಲ್ಲಿ ದಾವೆ ಹೂಡಿದೆ. ಈಗ ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯ ಆ ಹಳ್ಳಿಗಳ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಮುಂದಾಗಿದೆ. ಇದನ್ನೇ ಸಾಕ್ಷ್ಯಾಧಾರವಾಗಿ ರೂಪಿಸಿಕೊಂಡು ನ್ಯಾಯಾಲಯಕ್ಕೆ ಸಲ್ಲಿಸಲು ಹುನ್ನಾರ ನಡೆಸಿದೆ. ಈ ಬೆಳವಣಿಗೆ ನಾಡು, ನುಡಿ ಮತ್ತು ಗಡಿಯ ಹಿತಾಸಕ್ತಿಗೆ ಮಾರಕವಾಗಿದೆ ಎಂಬ ಭಾವನೆ ಗಡಿ ಕನ್ನಡಿಗರಲ್ಲಿ ಮೂಡಿದೆ. ಹಾಗಾಗಿ, ಮಹಾರಾಷ್ಟ್ರದ ಕ್ರಮಕ್ಕೆ ಪ್ರತ್ಯುತ್ತರ ನೀಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಗಡಿ ಕನ್ನಡ ಸಂಘಟನೆಗಳ ಸಲಹೆ ಪಡೆಯಬೇಕು’ ಎಂದು ಆಗ್ರಹಿಸಿದ್ದಾರೆ.