ದಾವಣಗೆರೆ: ಮೀಸಲಾತಿಯನ್ನು ತೆಗೆಯುವ ಚಿಂತನೆಯೇ ಆರ್ಎಸ್ಎಸ್ನಲ್ಲಿ ಇಲ್ಲ. ಕೊನೇ ಉಸಿರು ಇರುವವರೆಗೆ ಮೀಸಲಾತಿಗೆ ಧಕ್ಕೆ ಬರಲು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರೇ ಹೇಳಿದ್ದಾರೆ ಎಂದು ಕೇಂದ್ರ ಸಮಾಜ ಕಲ್ಯಾಣ ಇಲಾಖೆಯ ರಾಜ್ಯ ಸಚಿವ ಎ. ನಾರಾಯಣ ಸ್ವಾಮಿ ಸ್ಪಷ್ಟಪಡಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ಮೀಸಲಾತಿ ರದ್ದಾಗುತ್ತದೆ ಎಂದು ಕಾಂಗ್ರೆಸ್ ಹಬ್ಬಿಸಿದೆ. ಅದೇ ಕಾಂಗ್ರೆಸ್ ಭಾರತಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಅಂಬೇಡ್ಕರ್ ಅವರನ್ನು ಸೋಲಿಸಿತ್ತು ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಜಾತಿ ಗಣತಿಯನ್ನು ಮಾಡಿಸಿದವರೇ ಅಧಿಕಾರದಲ್ಲಿ ಇರುವಾಗ ಅದರ ವರದಿ ಬಿಡುಗಡೆ ಯಾಕೆ ಮಾಡಿಲ್ಲ? ಈಗ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಹತ್ತಿರ ಬಂದಾಗ ನೆನಪಾಗಿದೆ. ಜಾತಿ ಗಣತಿ ಬಗ್ಗೆ ತಜ್ಞರ ವರದಿ ಆಧರಿಸಿ ಬಿಜೆಪಿ ತನ್ನದೇ ನಿಲುವು ತೆಗೆದುಕೊಳ್ಳಲಿದೆ ಎಂದರು.
ಸದಾಶಿವ ಆಯೋಗದ ವರದಿ ಜಾರಿ ಮಾಡಲು ಬದ್ಧ ಎಂದು ತಿಳಿಸಿದರು.
ಬೆಲೆ ಏರಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ಎಲೆಕ್ಟ್ರಿಕಲ್ ವೆಹಿಕಲ್ ತೆಗೆದುಕೊಳ್ಳಿ’ ಎಂದು ಹೇಳಿ ಪತ್ರಿಕಾಗೋಷ್ಠಿಯಿಂದ ಎದ್ದು ಹೋದರು.