ಯಾವುದೇ ಪಕ್ಷದ ಸರ್ಕಾರವಿರಲಿ; ಅಪ್ರಾಮಾಣಿಕರಿಗೆ, ಜಾತಿವಾದಿಗಳಿಗೆ, ದುಡ್ಡು ಕೊಳ್ಳೆ ಹೊಡೆದು ಪಾಲು ಹಂಚುವ ಅಧಿಕಾರಿಗಳಿಗೆ ಅಗ್ರಪಟ್ಟ. ದಕ್ಷರು, ನಿಷ್ಠುರವಾದಿಗಳು ಯಾವತ್ತೂ ಲೋಕವಿರೋಧಿಗಳೇ.
ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ (2006–07) ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತ ತನಿಖೆಗೆ ಆದೇಶಿಸಿದ್ದರು. ಬಿ.ಎಸ್. ಯಡಿಯೂರಪ್ಪ ಅಧಿಕಾರದಲ್ಲಿದ್ದ ಅವಧಿಯಲ್ಲಿ ಅಕ್ರಮ ಗಣಿಗಾರಿಕೆ ಮುಗಿಲು ಮುಟ್ಟಿತ್ತು. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಸಿದ್ದರಾಮಯ್ಯ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಿದ್ದರು. ಲೋಕಾಯುಕ್ತರಾಗಿದ್ದ ಸಂತೋಷ್ ಹೆಗ್ಡೆ 2011ರಲ್ಲಿ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಿದರು.
ಪರಿಣಾಮ ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು. ಐಎಫ್ಎಸ್ ಅಧಿಕಾರಿ ಯು.ವಿ. ಸಿಂಗ್ ನೇತೃತ್ವದಲ್ಲಿದ್ದ ವಿಪಿನ್ ಸಿಂಗ್, ಬಿಸ್ವಜಿತ್ ಮಿಶ್ರಾ, ಗೋಕುಲ್, ತಕತ್ ಸಿಂಗ್ ರಣಾವತ್, ಉದಯಕುಮಾರ್ ತಂಡ ತನಿಖಾ ವರದಿ ಸಿದ್ಧಪಡಿಸಿತ್ತು. ಒಂದರ್ಥದಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಲೋಕಾಯುಕ್ತ ವರದಿ ಕಾರಣವಾಗಿತ್ತು.
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಬಳಿಕ ಈ ಅಧಿಕಾರಿಗಳ ದಕ್ಷತೆ, ಪ್ರಾಮಾಣಿಕತೆಯನ್ನು ಬಳಸಿ ಕೊಳ್ಳಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಆದರೆ, ಯು.ವಿ. ಸಿಂಗ್ ಅವರನ್ನು ಔಷಧ ಮತ್ತು ಗಿಡಮೂಲಿಕೆಗಳ ಪ್ರಾಧಿಕಾರದ ಸಿಇಒ ಹುದ್ದೆ ಕೊಡಲಾಯಿತು. ಉಳಿದವರಿಗೆ ಉತ್ತಮ ಹುದ್ದೆ ಸಿಕ್ಕಿರಲೇ ಇಲ್ಲ.
ಕರ್ನಾಟಕದಲ್ಲಿ ಒಳ್ಳೆಯವರಿಗೆ ಕಾಲವಿಲ್ಲ ಎಂದರಿತ ಅನೇಕರು ಕೇಂದ್ರ ಸೇವೆಗೆ ಹೋದವರು ವಾಪಸು ಬಂದಿಲ್ಲ. ಈ ಪೈಕಿ ಸುಧೀರ್ ಕೃಷ್ಣ, ಉಪೇಂದ್ರ ತ್ರಿಪಾಠಿ, ವಿ.ಪ. ಬಳಿಗಾರ ಹೆಸರನ್ನು ಇಲ್ಲಿ ಉಲ್ಲೇಖಿಸಲೇಬೇಕು. ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವು ನಿಗೂಢವಾಗಿಯೇ ಉಳಿದಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಮನಗರ ಎಸಿಎಫ್ ಆಗಿದ್ದ ತಕತ್, ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ವಿರುದ್ಧ ಅರಣ್ಯ ಅಕ್ರಮ ತಡೆ ಮೊಕದ್ದಮೆ ಯನ್ನೂ ದಾಖಲಿಸಿದ್ದರು. ಅದಕ್ಕೆ ಆಗ ಪ್ರೇರಣೆ ಕೊಟ್ಟವರು ಅಂದಿನ ಅರಣ್ಯ ಸಚಿವ ಸಿ.ಪಿ. ಯೋಗೇಶ್ವರ. ಬಳಿಕ ಅದೇ ಯೋಗೇಶ್ವರ ಕಾಂಗ್ರೆಸ್ಗೆಬಂದರು. ತಕತ್ ಮೂಲೆಗುಂಪಾದರು.
ವರ್ಗಾವಣೆ ಯಾರ ಹೊಣೆ
ಶಾಸಕರು: ಸಬ್ ಇನ್ ಸ್ಪೆಕ್ಟರ್, ಸರ್ಕಲ್ ಇನ್ ಸ್ಪೆಕ್ಟರ್, ಸಬ್ ರಿಜಿಸ್ಟ್ರಾರ್, ರೆವಿನ್ಯೂ ಇನ್ ಸ್ಪೆಕ್ಟರ್, ಪಿಡಿಒ, ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಎಂಜಿನಿಯರ್ಗಳು
ಸಚಿವರು: ತಮ್ಮ ಇಲಾಖೆಯ ಐಎಎಸ್, ಐಪಿಎಸ್, ಐಎಫ್ಎಸ್, ಉಪವಿಭಾಗಾಧಿಕಾರಿ, ಹಿರಿಯ ಶ್ರೇಣಿಯ ಕೆಎಎಸ್, ಕೆಪಿಎಸ್, ಕೆಇಎಸ್ ಅಧಿಕಾರಿಗಳಿಗಿಂತ ಕೆಳಗಿನ ಸಿಬ್ಬಂದಿ
ಮುಖ್ಯಮಂತ್ರಿ: ಗೃಹ, ಕಂದಾಯ, ಅಬಕಾರಿ, ಸಾರಿಗೆ, ಲೋಕೋಪಯೋಗಿ, ಇಂಧನ, ನಗರಾಭಿ ವೃದ್ಧಿ ಸೇರಿದಂತೆ ಎಲ್ಲ ಇಲಾಖೆಗಳ ಪ್ರಮುಖ ಹುದ್ದೆಗಳು. ಉಪವಿಭಾಗಾಧಿಕಾರಿ, ಡಿವೈಎಸ್ಪಿ, ಅಬಕಾರಿ ಡಿ.ಸಿ, ಜಿಲ್ಲಾಪಂಚಾಯತಿ, ಜಿಲ್ಲಾಡಳಿತದ ನಿರ್ಣಾಯಕ ಅಧಿಕಾರಿಗಳು. ವಿಧಾನಸಭಾ ಮತ್ತು ವಿಧಾನಪರಿಷತ್ ಸಚಿವಾಲಯದ ಬಿಟ್ಟು ಉಳಿದೆಲ್ಲ ಸಚಿವಾಲಯದ ಅಧಿಕಾರಿಗಳು
(ಸದ್ಯ ಇರುವ ಪದ್ಧತಿ)
**
ವರ್ಗಾವಣೆಗೆ ಸ್ಪಷ್ಟ ನೀತಿ ಇರಬೇಕು. ಈ ವಿಷಯದಲ್ಲಿ ಮಂತ್ರಿಗಳು ಹಾಗೂ ರಾಜಕಾರಣಿಗಳ ಹಸ್ತಕ್ಷೇಪ ಇರಬಾರದು. ಭ್ರಷ್ಟ ರಾಜಕಾರಣಿಗಳಿಂದಾಗಿ ವರ್ಗಾವಣೆ ದೊಡ್ಡ ದಂಧೆ ಆಗಿದೆ. ಇದು ಪಾರದರ್ಶಕವಾಗಬೇಕಾದರೆ ಸ್ವತಂತ್ರ ಮಂಡಳಿ ಇರಬೇಕು.
–ರವಿಕೃಷ್ಣಾರೆಡ್ಡಿ, ಲಂಚ ಮುಕ್ತ ಕರ್ನಾಟಕ ವೇದಿಕೆ ಮುಖಂಡ
**
ಇನ್ನಷ್ಟು ಸುದ್ದಿಗಳು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.