ಬೆಂಗಳೂರು: ಮಹರ್ಷಿ ವಾಲ್ಮೀಕಿ ನಿಗಮದ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಬೆಂಗಳೂರು ಹಾಗೂ ಬಳ್ಳಾರಿಯ ‘ಕೆಲವು ಪ್ರಮುಖರಿಗೆ’ ನಗದು ರೂಪದಲ್ಲಿ ದೊಡ್ಡ ಮೊತ್ತ ಸಂದಾಯ ಆಗಿರುವುದನ್ನು ಪತ್ತೆಹಚ್ಚಿದೆ.
ಹೈದರಾಬಾದ್ನ ‘ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ’ಯ (ಎಫ್ಎಫ್ಸಿಸಿಎಸ್ಎಲ್) 18 ಖಾತೆಗಳಿಗೆ ವಾಲ್ಮೀಕಿ ನಿಗಮದ ಖಾತೆಯಿಂದ ₹94.73 ಕೋಟಿ ಹಣ ವರ್ಗಾವಣೆ ಆಗಿತ್ತು. ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ರಾಜ್ಯ ಸರ್ಕಾರವು ಎಸ್ಐಟಿಗೆ ವಹಿಸಿತ್ತು.
‘18 ಖಾತೆಗಳ ಪೈಕಿ ಒಂದು ಖಾತೆಯಿಂದ ನಿಗಮದ ಖಾತೆಗೆ ₹5 ಕೋಟಿ ಹಣ ವಾಪಸ್ ಬಂದಿದೆ. ಆದರೆ, ಉಳಿದ 17 ಖಾತೆಗಳಿದ್ದ ₹89.73 ಕೋಟಿ ಡ್ರಾ ಆಗಿರುವುದು ಪತ್ತೆಯಾಗಿದೆ. ಈ ಹಣವು ಬೆಂಗಳೂರು ಹಾಗೂ ಬಳ್ಳಾರಿಯ ಪ್ರಮುಖರ ಕೈಸೇರಿದೆ. ಯಾರಿಗೆ ಹಣ ಸಂದಾಯವಾಗಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.
‘ಹಣ ವರ್ಗಾವಣೆಯಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಅವರ ಆಪ್ತ ನೆಕ್ಕುಂಟಿ ನಾಗರಾಜ್ ಹಾಗೂ ಆತನ ಸಂಬಂಧಿ ನಾಗೇಶ್ವರ ರಾವ್ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರ ವಿಚಾರಣೆ ನಡೆಸಲಾಗುತ್ತಿದೆ.
ಎಫ್ಎಫ್ಸಿಸಿಎಸ್ಎಲ್ ಅಧ್ಯಕ್ಷ ಸತ್ಯನಾರಾಯಣ ಅವರು ಕಸ್ಟಡಿಯಲಿದ್ದು, 17 ನಕಲಿ ಖಾತೆಗಳನ್ನು ತೆರೆದವರಿಗಾಗಿ ಪತ್ತೆ ಕಾರ್ಯ ನಡೆಯುತ್ತಿದೆ’ ಎಂದು ಹೇಳಿವೆ.
ಮೊಬೈಲ್ ನಾಶಪಡಿಸಿದ ಎಂಡಿ?:
‘ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಜೆ.ಜೆ.ಪದ್ಮನಾಭ್ ತನ್ನ ಮೊಬೈಲ್ ನಾಶಪಡಿಸಿದ್ದಾನೆ. ಪದ್ಮನಾಭ್ ಸ್ನೇಹಿತ ಎಸ್.ಎಂ.ದಿವಾಕರ್ ಎಂಬವರನ್ನು ವಿಚಾರಣೆ ನಡೆಸಲಾಗಿದೆ. ಅಕ್ರಮಕ್ಕೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳು ಲಭಿಸಿವೆ’ ಎಂದು ಗೊತ್ತಾಗಿದೆ.
‘ನಿಗಮದ ಅಧಿಕಾರಿಗಳ ವಿಚಾರಣೆ ಮುಂದುವರಿದಿದ್ದು ಕೆಲವು ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ನಾಗರಾಜ್, ನಾಗೇಶ್ವರ ರಾವ್ ಹಾಗೂ ನಿಗಮದ ಬಂಧಿತ ಅಧಿಕಾರಿಗಳನ್ನು ಮುಖಾಮುಖಿ ವಿಚಾರಣೆ ನಡೆಸಲಾಗಿದೆ. ನಾಗರಾಜ್ ಸೂಚನೆ ಮೇರೆಗೆ ಹಣ ವರ್ಗಾವಣೆ ಮಾಡಿಸಲಾಗಿದೆ. ಹೆಚ್ಚಿನ ಮಾಹಿತಿ ಇಲ್ಲ. ನಿಗಮದ ನಕಲಿ ಸೀಲುಗಳು ಹಾಗೂ ದಾಖಲೆಗಳನ್ನು ನಾಗರಾಜ್, ನಾಗೇಶ್ವರ ರಾವ್ ಅವರೇ ಸೃಷ್ಟಿಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ’ ಎಂದು ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.