ಬೆಂಗಳೂರು: 'ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣಕ್ಕೆ ವಿಧಿಸಿದ ನಿರ್ಬಂಧಗಳನ್ನು ಉಲ್ಲಂಘಿಸಿದವರ ವಿರುದ್ಧ ಪ್ರಕೃತಿ ವಿಕೋಪ ತಡೆ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದರು.
ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಸಚಿವರು, 'ಕೋವಿಡ್ ಸಾಂಕ್ರಾಮಿಕ ಉಲ್ಬಣ ವಾಗುತ್ತಿರುವಈ ಸಂದರ್ಭದಲ್ಲಿ ಮುಂಜಾಗರೂಕತಾ ಕ್ರಮವಾಗಿ ತೆಗೆದುಕೊಂಡ ನಿರ್ಬಂಧಗಳನ್ನು ಎಲ್ಲರೂ ಬೆಂಬಲಿಸಿ, ಸಹಕರಿಸಬೇಕು' ಎಂದರು.
'ಕಾಂಗ್ರೆಸ್ ನಾಯಕರು ತಮ್ಮ ಹಟ ತೊರೆದು, ಕೋವಿಡ್ ಸೋಂಕು ನಿಯಂತ್ರಣ ಕಾರ್ಯದಲ್ಲಿ ಸರ್ಕಾರದ ಜೊತೆಗೆ ಕೈಜೋಡಿಸಬೇಕು. ಮೇಕೆದಾಟು ಯೋಜನೆಗೆ ಸಂಬಧಿಸಿದ ವ್ಯಾಜ್ಯ ಸುಪ್ರಿಂಕೋರ್ಟ್ ನಲ್ಲಿದೆ. ಕಾಂಗ್ರೆಸ್ ನವರು ಸರ್ಕಾರ ನಡೆಸಿದವರು. ಅವರು ಜವಾಬ್ದಾರಿಯಿಂದ ವರ್ತಿಸಬೇಕು' ಎಂದರು.
'ಅನಾರೋಗ್ಯ ಬಂದ ಮೇಲೆ, ಸಮಸ್ಯೆ ಎದುರಿಸುವುದಕ್ಕಿಂತ, ಬಾರದಂತೆ ತಡೆಯುವುದು ಅತ್ಯುತ್ತಮ ಪ್ರಯತ್ನ' ಎಂದ ಸಚಿವರು, 'ಕಾಂಗ್ರೆಸ್ ಪಾದಯಾತ್ರೆರಾಜಕೀಯ ಪ್ರೇರಿತ' ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, 'ವಾರಾಂತ್ಯ ಕರ್ಫ್ಯೂ ಹಾಗೂ ನೈಟ್ ಕರ್ಫ್ಯೂ ಜಾರಿ ವೇಳೆ ಪೊಲೀಸರು ಅತ್ಯಂತ ಸಹನೆಯಿಂದ ವರ್ತಿಸಬೇಕು, ಸಾರ್ವಜನಿಕರೂ ಸಹಕರಿಸಬೇಕು' ಎಂದರು.