ಹುಬ್ಬಳ್ಳಿ: ‘ಮಗ ಸೇನೆ ಸೇರ್ತಿನಿ ಅಂದಾಗ, ಪೊಲೀಸ್ ತರಹದ ಕೆಲಸ ಅಂದುಕೊಂಡೆ. ಆದರೆ, ಗಡಿಯಲ್ಲಿ ಪ್ರಾಣ ಒತ್ತೆ ಇಟ್ಟು ದೇಶ ಕಾಯೊ ಕೆಲಸ ಅಂತ ಗೊತ್ತಾದಾಗ ಪುತ್ರ ವಾತ್ಸಲ್ಯದಿಂದ ಭಯವಾದರೂ, ಅವನ ಬಗ್ಗೆ ಹೆಮ್ಮೆಯಾಯಿತು...’
ಎಂದು ಕುಂದಗೋಳ ತಾಲ್ಲೂಕಿನ ಶೆರವಾಡ ಗ್ರಾಮದ ಯೋಧ ಮಂಜುನಾಥ ಗೌಡಗೇರಿ ಅವರ ತಾಯಿ ನಿಂಗವ್ವ ಗೌಡಗೇರಿ ಮಗನ ಬಗ್ಗೆ ಆತಂಕ ಮಿಶ್ರಿತ ಹೆಮ್ಮೆಯಿಂದಲೇ ಮಾತನಾಡುತ್ತಾರೆ.
‘ಟಿವಿಗಳಲ್ಲಿ ಯುದ್ಧ, ಉಗ್ರರ ದಾಳಿ, ಗಡಿಯಲ್ಲಿ ಕಾರ್ಯಾಚರಣೆ, ಬಾಂಬ್ ದಾಳಿಯಂಥ ಸುದ್ದಿಗಳನ್ನು ಕೇಳುವಾಗ, ನೋಡಿದಾಗ ಮಗನ ಚಿಂತೆ ಕಾಡಲಾರಂಭಿಸುತ್ತದೆ. ತಕ್ಷಣ ಅವನಿಗೆ ಫೋನ್ ಮಾಡಿ ಮಾತನಾಡಲು ಯತ್ನಿಸುತ್ತೇವೆ. ಕೆಲವೊಮ್ಮೆ ಸಿಗುವುದಿಲ್ಲ. ಅವನೊಂದಿಗೆಮಾತನಾಡುವ ತನಕ ಸಮಾಧಾನ ಆಗುವುದಿಲ್ಲ’.
‘ಗಡಿಯಲ್ಲಿದ್ದರೂ ಕುಟುಂಬ ಕಾಯುವ ನನ್ನ ಮಗನನ್ನು ದೇವರು ಸದಾ ಕಾಯ್ತಾನೆ ಎಂಬ ನಂಬಿಕೆ ಮೇಲೆ ಆತನನ್ನು ಅಲ್ಲಿ ಬಿಟ್ಟಿದ್ದೇನೆ. ಬದುಕಿಗಾಗಿ ಎಲ್ಲರೂ ಒಂದಲ್ಲಾ ಒಂದು ರೀತಿ ಪ್ರಾಣ ಒತ್ತೆ ಇಟ್ಟು ದುಡಿಯುತ್ತಿರುತ್ತಾರೆ. ಅದರಂತೆ, ನನ್ನ ಮಗನೂ ದೇಶಕ್ಕಾಗಿ ಪ್ರಾಣ ಒತ್ತೆ ಇಟ್ಟು ದುಡಿಯುತ್ತಿದ್ದಾನೆ. ಜನ ನನ್ನನ್ನು ನೋಡಿ, ಇವರ ಮಗ ಸೇನೆ ಸೇರಿ, ದೇಶ ಕಾಯ್ತಿದ್ದಾನೆ ಎಂದು ಹೇಳುವಾಗ ನನಗೆ ಹೆಮ್ಮೆ ಎನಿಸುತ್ತದೆ. ಹೆತ್ತವರಿಗೆ ಇದಕ್ಕಿಂತ ಮತ್ತೇನು ಬೇಕು?’ ಎಂದು ನಿಂಗವ್ವ ಗೌಡಗೇರಿ ಕಣ್ಣೀರಾಗುತ್ತಾರೆ.