ಬೆಂಗಳೂರು:ರಾಜ್ಯದಲ್ಲಿ ತಲೆದೋರಿರುವ ನೆರೆ ಪರಿಹಾರಕ್ಕಾಗಿ ತಕ್ಷಣ ಮೂರು ಸಾವಿರ ಕೋಟಿ ರೂಪಾಯಿ ನೆರವು ನೀಡಬೇಕೆಂದು ಕೇಂದ್ರಕ್ಕೆ ಪತ್ರ ಬರೆದಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಕೃಷ್ಣಾದಲ್ಲಿ ಶನಿವಾರ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದನ್ನು ರಾಷ್ಟ್ರೀಯ ಅನಾಹುತ ಎಂದು ಹೇಳಿಸಲು ಕೇಂದ್ರದ ಮೇಲೆ ಒತ್ತಡ ಹಾಕಬೇಕಿಲ್ಲ ಎಂದರು.
ಕೇಂದ್ರಕ್ಕೆ ಇಲ್ಲಿನ ಪರಿಸ್ಥಿತಿಯ ಅರಿವಿದೆ. ಅದಕ್ಕಾಗಿಯೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕಳುಹಿಸಿಕೊಟ್ಟಿದ್ದಾರೆ. ಇನ್ನೂ ಒಂದೆರಡು ದಿನ ನೋಡಿಕೊಂಡು ಇನ್ನಷ್ಟು ನೆರವಿಗೆ ಬೇಡಿಕೆ ಸಲ್ಲಿಸಲಾಗುವುದು ಎಂದರು.
ಸಚಿವ ಪ್ರಹ್ಲಾದ ಜೋಷಿ ನೆರವು ಕೇಳಿಲ್ಲ ಎಂದು ಹೇಳಿಯೇ ಇಲ್ಲ ಎಂದ ಅವರು, ಪ್ರವಾಹ ಪೀಡಿತ ಪ್ರದೇಶಗಳ ಭೇಟಿ ವಿಷಯದಲ್ಲಿ ತಾವು ತಾರತಮ್ಯ ಮಾಡುತ್ತಿಲ್ಲ, ಹೆಚ್ಚು ಪ್ರವಾಹ ಸಂಕಷ್ಟ ಪ್ರದೇಶಕ್ಜೆ ತೆರಳಿದ್ದೇನೆ, ಉಳಿದ ಕಡೆಗಳಿಗೂ ಭೇಟಿ ನೀಡುತ್ತೇನೆ ಎಂದರು.
ಸಂಪುಟ ವಿಸ್ತರಣೆ ಶೀಘ್ರ ನಡೆಯಲಿದೆ ಎಂದ ಅವರು, ಶಾಸಕರೆಲ್ಲ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ ಎಂದರು.