ಶಿವಮೊಗ್ಗ: ಸಾಗರ ತಾಲ್ಲೂಕಿನ ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಸಂಜೆ ನಡೆದ ಎಂಟನೇ ಘಟಿಕೋತ್ಸವದಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರಿಗೆ ರಾಜ್ಯಪಾಲ ಥ್ಯಾವರ್ ಚಂದ್ ಗೆಹಲೋತ್ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.
ಪದವಿ ಪ್ರದಾನ
ಇದೇ ವೇಳೆ ರಾಜ್ಯಪಾಲರು ವಿಶ್ವವಿದ್ಯಾಲಯದ 409 ವಿದ್ಯಾರ್ಥಿಗಳಿಗೆ ಕೃಷಿ, ತೋಟಗಾರಿಕೆ ಹಾಗೂ ಅರಣ್ಯ ವಿಷಯಗಳಲ್ಲಿ ಪದವಿ, 101 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಹಾಗೂ 23 ವಿದ್ಯಾರ್ಥಿಗಳಿಗೆ ಪಿಎಚ್ ಡಿ ಪದವಿ ಪ್ರದಾನ ಮಾಡಿದರು.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತೋಟಗಾರಿಕೆ ಮಹಾವಿದ್ಯಾಲಯದ ವಿದ್ಯಾರ್ಥಿನಿ ಎಂ.ಡಿ.ಕಾವ್ಯಾ ನಾಲ್ಕು ಚಿನ್ನದ ಪದಕಗಳ ಮುಡಿಗೇರಿಸಿಕೊಂಡು, ಬಿಎಸ್ಸಿಯಲ್ಲಿ ಅತಿಹೆಚ್ಚು ಪದಕ ಪಡೆದ ಶ್ರೇಯಕ್ಕೆ ಪಾತ್ರರಾದರು.
ಕೃಷಿ ವಿಷಯದಲ್ಲಿ ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಎನ್.ಸಿಂಧೂರ ಮೂರು ಚಿನ್ನದ ಪದಕಗಳ ಪಡೆದರು.
ಎಂಎಸ್ಸಿ ಕೃಷಿ ವಿಷಯದ ಕೀಟಶಾಸ್ತ್ರ ವಿಭಾಗದಲ್ಲಿ ರತ್ನಕಲಾ ಎರಡು ಚಿನ್ನದ ಪದಕಗಳ ಪಡೆದರು.
ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ, ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ.ಜಗದೀಶ್ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಡಾ. ವೀರೇಂದ್ರ ಹೆಗ್ಗಡೆ ಗೈರು
ಘಟಿಕೋತ್ಸವ ಭಾಷಣ ಮಾಡಬೇಕಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಗೈರು ಹಾಜರಾಗಿದ್ದರು. ಅವರ ಮುದ್ರಿತ ವಿಡಿಯೊ ಭಾಷಣವನ್ನು ಬಿತ್ತರಿಸಲಾಯಿತು.
ಕುಟುಂಬದ ಸದಸ್ಯರು, ಬೆಂಬಲಿಗರು ಭಾಗಿ: ಬಿ.ಎಸ್.ಯಡಿಯೂರಪ್ಪ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನದ ವೇಳೆ ಪುತ್ರ, ಸಂಸದ ಬಿ.ವೈ.ರಾಘವೇಂದ್ರ, ಪುತ್ರಿ ಅರುಣಾದೇವಿ ಕುಟುಂಬ ಸಮೇತ ಪಾಲ್ಗೊಂಡಿದ್ದರು.
ಬಿಜೆಪಿ ಜಿಲ್ಲಾ ಘಟಕದ ಆಧ್ಯಕ್ಷ ಟಿ.ಡಿ.ಮೇಘರಾಜ್, ವಿಧಾನಪರಿಷತ್ ಸದಸ್ಯ ಎಸ್.ರುದ್ರೇಗೌಡ, ಮಾಜಿ ಶಾಸಕರಾದ ಹರತಾಳು ಹಾಲಪ್ಪ, ಕೆ.ಬಿ.ಅಶೋಕ ನಾಯ್ಕ, ಬೆಂಬಲಿಗರಾದ ಎಚ್.ದತ್ತಾತ್ರಿ, ಡಾ.ಧನಂಜಯ ಸರ್ಜಿ, ಜ್ಯೋತಿಪ್ರಕಾಶ್, ದಿವಾಕರ್ ಹಾಜರಿದ್ದರು.
ಮಳೆಯಲ್ಲಿ ಹೆಜ್ಜೆ ಹಾಕಿದರು: ವಿಶ್ವವಿದ್ಯಾಲಯದ ಆವರಣದಲ್ಲಿ ಹಾಕಲಾಗಿದ್ದ ಘಟಿಕೋತ್ಸವ ವೇದಿಕೆಗೆ ರಾಜ್ಯಪಾಲರು ಹಾಗೂ ಗಣ್ಯರು ಮಳೆಯ ನಡುವೆಯೇ ಕೆಂಪು ಹಾಸಿನ ಮೇಲೆ ಹೆಜ್ಜೆ ಹಾಕಿದರು.