ಶಿವಮೊಗ್ಗ: ಹೃದಯದ ಸಮಸ್ಯೆಗೆ ಒಳಗಾಗಿದ್ದ 10 ದಿನಗಳ ಮಗುವನ್ನು ಇಲ್ಲಿನ ಮೆಗ್ಗಾನ್ ಆಸ್ಪತ್ರೆಯಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಸೋಮವಾರ ಜೀರೊಟ್ರಾಫಿಕ್ನಲ್ಲಿ ಕೆರೆದುಕೊಂಡು ಹೋಗಲಾಯಿತು.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಸುಧಾ–ಸ್ವಾಮಿ ದಂಪತಿಗೆ ಜ.31ರಂದು ಮಗುಜನಿಸಿದೆ. ಹುಟ್ಟಿದಾಗಲೇ ಹೃದಯ ಸಮಸ್ಯೆ ಇತ್ತು.ಜಯದೇವ ಆಸ್ಪತ್ರೆಯಲ್ಲಿ ತುರ್ತಾಗಿ ಶಸ್ತ್ರಚಿಕಿತ್ಸೆ ಕೈಗೊಳ್ಳಬೇಕಾದ ಕಾರಣ ಬೆಳಿಗ್ಗೆ 8.30ಕ್ಕೆ ಜೀರೊ ಟ್ರಾಫಿಕ್ ಮೂಲಕ ಬೆಂಗಳೂರಿಗೆ ಕರೆದುಕೊಂಡು ಹೋಗಲಾಯಿತು.
ಆಂಬುಲೆನ್ಸ್ನಲ್ಲೇ ಮಗುವಿನ ಉಸಿರಾಟಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ತ್ವರಿತವಾಗಿ ಬೆಂಗಳೂರಿಗೆ ತಲುಪಲು ಪೊಲೀಸರು ಅನುವು ಮಾಡಿಕೊಟ್ಟಿದ್ದಾರೆ ಎಂದು ಮೆಗ್ಗಾನ್ ಆಸ್ಪತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಆರ್.ರಘುನಂದನ್ ಮಾಹಿತಿ ನೀಡಿದರು.
‘10 ದಿನದ ಮಗುವಿಗೆ ಹೃದಯದ ಶಸ್ತ್ರಚಿಕಿತ್ಸೆ ನಡೆಸಲು ಸಾಧ್ಯವಿಲ್ಲ. ಹೀಗಾಗಿ, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ಮಗುವನ್ನು ಸ್ಥಳಾಂತರಿಸಲಾಗಿದೆ. 2–3 ತಿಂಗಳ ಬಳಿಕ ಹೃದಯ ಸ್ವಲ್ಪ ಬೆಳವಣಿಗೆ ಆಗಿರುತ್ತದೆ. ಆಗ ಚಿಕಿತ್ಸೆ ನಡೆಸಲಾಗುವುದು’ ಎಂದು ಜಯದೇವ ಆಸ್ಪತ್ರೆಯ ವೈದ್ಯರು ತಿಳಿಸಿದರು.