‘ಜಿಲ್ಲೆಯಲ್ಲಿ ರೈತರಿಗೆ ಮತ್ತು ಉಪ್ಪು ಉದ್ಯಮಕ್ಕೆ ತುಂಬಾ ನಷ್ಟವಾಗಿದೆ. ಒಂದು ದಿವಸದ ಮಳೆಯಿಂದಾಗಿ ವಾರಕ್ಕಿಂತಲೂ ಹೆಚ್ಚಿನ ಕಾಲ ಉಪ್ಪು ತೆಗೆಯಲು ಸಾಧ್ಯವಾಗುವುದಿಲ್ಲ’ ಎಂದು ಸಾಣಿಕಟ್ಟಾದ ನಾಗರಬೈಲ್ ಉಪ್ಪಿನ ಮಾಲೀಕರ ಸಹಕಾರಿ ಸಂಘದ ಅಧ್ಯಕ್ಷ ಅರುಣ ನಾಡ್ಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕಳೆದ ವರ್ಷ ಮೇನಲ್ಲಿಯೇ ಮಳೆ ಆರಂಭವಾದ ಕಾರಣ ಸಂಘಕ್ಕೆ ಸುಮಾರು 4,000 ಟನ್ಗಳಷ್ಟು ಕೊರತೆ ಅನುಭವಿಸಿತ್ತು. ಈ ವರ್ಷ ಉತ್ತಮ ಉತ್ಪಾದನೆಯ ನಿರೀಕ್ಷೆ ಇತ್ತು. ಸ್ವಲ್ಪ ಮಳೆಯಾದರೂ ಉಪ್ಪಿನ ಆಗರಗಳ ಗುನ್ನಗಳಲ್ಲಿ ನೀರು ತುಂಬಿ ಉಪ್ಪಿನ ಸಾಂದ್ರತೆಯು ಕಡಿಮೆಯಾಗುವುದು. ಪುನಃ ಉಪ್ಪು ಬರಲು 8–10 ದಿನಗಳೇ ಬೇಕಾಗುತ್ತದೆ’ ಎಂದು ನುಡಿದರು.
ಹೊನ್ನಾವರ, ಕುಮಟಾ ತಾಲ್ಲೂಕುಗಳಲ್ಲಿ ಅಕಾಲ ಮಳೆಯಿಂದ ರೈತರು ಬಿಸಿಲಿಗೆ ಒಣಗಿಸಿದ್ದ ಅಡಿಕೆ, ಕೊಬ್ಬರಿ, ಶೇಂಗಾ ಮೊದಲಾದ ಬೆಳೆ ಹಾನಿಗೀಡಾಗಿದೆ. ಇದು ಕಬ್ಬಿನ ಆಲೆಮನೆ ಸಮಯವಾಗಿರುವುದರಿಂದ ಆಲೆಮನೆಯಲ್ಲಿದ್ದ ಬೆಲ್ಲ ಮೊದಲಾದ ವಸ್ತುಗಳಿಗೂ ಹಾನಿಯಾಗಿದೆ.
ಮಲೆನಾಡಲ್ಲೂ ಮಳೆ: ಜಿಲ್ಲೆಯ ಕರಾವಳಿಯ ಕೆಲ ಭಾಗದಲ್ಲಿ ಮುಂಜಾನೆಯಿಂದ ಆರಂಭವಾದ ಮಳೆ ಮಧ್ಯಾಹ್ನದವರೆಗೆ ಸುರಿದಿದೆ. ಮಲೆನಾಡಿನ ಶಿರಸಿ, ಸಿದ್ದಾಪುರದಲ್ಲೂ ಬೆಳಿಗ್ಗೆ ಸ್ವಲ್ಪ ಹೊತ್ತು ಮಳೆ ಬಿದ್ದಿದೆ. ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ ಜಿಲ್ಲೆಗಳ ವಿವಿಧೆಡೆ ಹಾಗೂ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ತುಂತುರು ಮಳೆಯಾಗಿದೆ.