ಬೆಳಗಾವಿ: ಇಲ್ಲಿಯ ಮಹಾನಗರ ಪಾಲಿಕೆಯ ಉಪ ಮೇಯರ್ ಆಗಿ ವಿರೋಧ ಪಕ್ಷದ ಎಂ.ಇ.ಎಸ್. ಅಭ್ಯರ್ಥಿ ರೇಣುಕಾ ಸುಹಾಸ ಕಿಲ್ಲೇಕರ ಆಯ್ಕೆ ಯಾಗಿದ್ದಾರೆ.ಗುರುವಾರ ನಡೆದ ಚುನಾವಣೆಯಲ್ಲಿ ಆಡಳಿತ ಪಕ್ಷದ ಕೆಲವು ಕನ್ನಡ ಪರ ಸದಸ್ಯರು ಮಹಾರಾಷ್ಟ್ರ ಏಕೀಕರಣ ಸಮಿತಿಯೊಂದಿಗೆ ಕೈಜೋಡಿಸಿದ್ದರಿಂದ ರೇಣುಕಾ ಕಿಲ್ಲೇಕರ ಜಯ ಗಳಿಸಿದರು.
ಆಡಳಿತ ಪಕ್ಷವಾದ ಸರ್ವ ಭಾಷಿಕ ಸಂವಿಚಾರಿ ವಿಕಾಸ ವೇದಿಕೆಯಿಂದ ಮೇಯರ್ ಆಗಿ ಆಯ್ಕೆಗೊಂಡಿರುವ ಮಂದಾ ಬಾಳೇಕುಂದ್ರಿ ಅವರು ಈಗಾಗಲೇ ಎಂ.ಇ. ಎಸ್.ನೊಂದಿಗೆ ಗುರುತಿಸಿಕೊಳ್ಳುತ್ತಿದ್ದು, ಇದೀಗ ಉಪ ಮೇಯರ್ ಪಟ್ಟವೂ ಎಂಇಎಸ್ಗೆ ಒಲಿದಿರುವುದರಿಂದ ಪಾಲಿಕೆ ಆಡಳಿತವು ಎಂಇಎಸ್ ಪಾಲಾದಂತಾಗಿದೆ.
ನಾಮಪತ್ರ ಸಲ್ಲಿಸಿದ್ದ 9 ಅಭ್ಯರ್ಥಿಗಳ ಪೈಕಿ, ಆಡಳಿತ ಪಕ್ಷದ ಅಭ್ಯರ್ಥಿಗಳಾದ ಫಿರ್ದೋಸ್ ದರ್ಗಾ, ದೀಪಕ್ ವಾಘೇಲಾ ಹಾಗೂ ಎಂಇಎಸ್ ಅಭ್ಯರ್ಥಿಯಾಗಿ ರೇಣುಕಾ ಕಿಲ್ಲೇಕರ ಅಂತಿಮವಾಗಿ ಚುನಾವಣಾ ಕಣದಲ್ಲಿ ಉಳಿದಿದ್ದರು.
ಚುನಾವಣೆಯಲ್ಲಿ ರೇಣು ಕಿಲ್ಲೇಕರರಿಗೆ 32 ಮತ, ಫಿರ್ದೋಸ್ ದರ್ಗಾರಿಗೆ 27 ಮತ ಬಿದ್ದಿವೆ. ದೀಪಕ್ ವಾಘೇಲಾ ಅವರು ಸ್ವತಃ ರೇಣುಕಾ ಕಿಲ್ಲೇಕರರಿಗೆ ಮತ ಚಲಾಯಿಸಿದ್ದರಿಂದ ಅವರು ಒಂದೂ ಮತವನ್ನು ಪಡೆಯಲಿಲ್ಲ.
ಏಳು ಕನ್ನಡ ಪರ ಸದಸ್ಯರು ರೇಣು ಅವರನ್ನು ಬೆಂಬಲಿಸುವ ಮೂಲಕ ಎಂ.ಇ.ಎಸ್.ಗೆ ಉಪ ಮೇಯರ್ ಪಟ್ಟವನ್ನು `ಕೊಡುಗೆ~ಯಾಗಿ ನೀಡಿದರು. ಮೇಯರ್ ಮಂದಾ ಬಾಳೇಕುಂದ್ರಿ ಹಾಗೂ ಪಾಲಿಕೆ ಆಡಳಿತ ಪಕ್ಷದ ನಾಯಕ ಸಂಭಾಜಿ ಪಾಟೀಲ ಅವರು ರೇಣುಕಾ ಕಿಲ್ಲೇಕರ ಅವರ ಪರ ಮತ ಚಲಾಯಿಸುವ ಮೂಲಕ ಎಂ.ಇ.ಎಸ್.ನತ್ತ ಒಲವು ತೋರಿಸಿದ್ದಾರೆ.