ಧಾರವಾಡ: ‘ಇಲ್ಲಿನ ಡಾ. ದ.ರಾ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನೀಡುವ ಅಂಬಿಕಾತನಯದತ್ತ ಪ್ರಶಸ್ತಿಗೆ ಹಿರಿಯ ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ ಮತ್ತು ಕವಿ ಎಚ್.ಎಸ್. ವೆಂಕಟೇಶಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ’ ಎಂದು ಟ್ರಸ್ಟ್ ಅಧ್ಯಕ್ಷ ಡಾ.ಶ್ಯಾಮಸುಂದರ ಬಿದರಕುಂದಿ ಗುರುವಾರ ಇಲ್ಲಿ ಹೇಳಿದರು.
‘ಪ್ರಶಸ್ತಿ ತಲಾ ₹ 50 ಸಾವಿರ ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಇದೇ 31 ರಂದು ನಡೆಯಲಿದೆ. ಪ್ರೊ.ಐ.ಜಿ ಸನದಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಬೇಂದ್ರೆಯವರ ಬದುಕು ಮತ್ತು ಸಾಧನೆ ಕುರಿತ ಬೇಂದ್ರೆ ಕಾವ್ಯಾನುಭವ ಕಾರ್ಯಕ್ರಮ ಫೆ. 1 ರಂದು ನಿಪ್ಪಾಣಿಯಲ್ಲಿ ನಡೆಯಲಿದೆ. ನಂತರ ಇದೇ ರೀತಿಯ ಕಾರ್ಯಕ್ರಮಗಳನ್ನು ಪುಣೆ, ಮುಂಬೈ, ಅಕ್ಕಲಕೋಟೆ ಹಾಗೂ ಸೊಲ್ಲಾಪುರದಲ್ಲಿ ಆಯೋಜಿಸಲಾಗುವುದು’ ಎಂದು ಹೇಳಿದರು.