ದಾವಣಗೆರೆ/ನ್ಯಾಮತಿ: ಮದುವೆ ಕಾರ್ಯದಲ್ಲಿ ಪಾಲ್ಗೊಂಡು ಗ್ರಾಮಕ್ಕೆ ವಾಪಸ್ ಆಗುತ್ತಿದ್ದ ಕ್ಯಾಂಟರ್ ಪಲ್ಟಿಯಾಗಿ 10 ಮಂದಿ ಮೃತಪಟ್ಟು, 33ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಹೊನ್ನಾಳಿ ತಾಲ್ಲೂಕಿನ ತುಗ್ಗಲಹಳ್ಳಿ ಗ್ರಾಮದ ಬಳಿ ಸೋಮವಾರ ಮಧ್ಯಾಹ್ನ ನಡೆದಿದೆ.
ಘಟನೆಯಲ್ಲಿ ಹರಿಹರ ತಾಲ್ಲೂಕು ಭಾನುವಳ್ಳಿಯ ಪರಮೇಶ್ವರಪ್ಪ (56), ಮಹಾದೇವ್ (60), ನಾಗಪ್ಪ (55), ಮುರಳಿ (9), ಸಂತೋಷ್ (25), ಮುರಳಿಸಿದ್ದಪ್ಪ (45), ನಾಗರಾಜ್ (50), ರವಿ (30), ಬಿ.ಬಿ.ಹನುಮಂತಪ್ಪ (55) ಹಾಗೂ ಹಡಗಲಿ ತಾಲ್ಲೂಕು ಅರವಿ ಗ್ರಾಮದ ಹನುಮಂತರೆಡ್ಡಿ (62) ಮೃತಪಟ್ಟವರು.
ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಗೊಂಡವರನ್ನು ದಾವಣ-ಗೆರೆಯ ಜಿಲ್ಲಾ ಆಸ್ಪತ್ರೆ ಹಾಗೂ ಎಸ್ಎಸ್ ಹೈಟೆಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನ್ಯಾಮತಿ ಸಮೀಪದ ತೀರ್ಥರಾಮೇಶ್ವರ ದೇಗುಲದಲ್ಲಿ ಒಡೆಯರಹತ್ತೂರು ಹುಡುಗನ ಜತೆಗೆ ಹರಿಹರ ತಾಲ್ಲೂಕು ಭಾನುವಳ್ಳಿಯ ಹುಡುಗಿಯ ವಿವಾಹ ನಡೆದಿತ್ತು. ಮದುವೆ ಮುಗಿಸಿಕೊಂಡು ಖುಷಿಯಿಂದಲೇ ವಾಹನ ಏರಿದ್ದಾರೆ. ಅವರ ಸಂತೋಷ ಕೆಲವೇ ಗಂಟೆಗಳಲ್ಲಿ ಕಣ್ಮರೆಯಾಗಿದೆ.
ತುಗ್ಗಲಹಳ್ಳಿ ಗ್ರಾಮದ ಬಳಿಯ ರಸ್ತೆ ಇಳಿಜಾರಿನಲ್ಲಿ ವೇಗವಾಗಿ ಬರುತ್ತಿದ್ದ ಕ್ಯಾಂಟರ್ ಪಲ್ಟಿಯಾಗಿ ಈ ದುರಂತ ಸಂಭವಿಸಿದೆ.
ಚಾಲಕನ ನಿರ್ಲಕ್ಷ್ಯ: ಈ ದುರ್ಘಟನೆಗೆ ಕ್ಯಾಂಟರ್ ಚಾಲಕನ ಅತಿವೇಗವೇ ಕಾರಣ ಎನ್ನಲಾಗಿದೆ. ಮಾನವೀಯತೆ ಮೆರೆದ ಗ್ರಾಮಸ್ಥರು: ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸ್ಥಳೀಯರು ನೆರವಾದರು. ಕೆಲವರನ್ನು ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ.
ಖಾಸಗಿ ವಾಹನಗಳಿಗೆ ಡೀಸೆಲ್ ವೆಚ್ಚ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಿದರು.