ಉಜಿರೆ: ಧರ್ಮಸ್ಥಳದಲ್ಲಿ ಶನಿವಾರ ಎಲ್ಲೆಲ್ಲೂ ಸಂಭ್ರಮ-ಸಡಗರ. ರತ್ನಗಿರಿಯಲ್ಲಂತೂ ಗಂಧ, ಚಂದನದ ಘಮ ಘಮ. ವಿವಿಧ ಮಂಗಲ ದ್ರವ್ಯಗಳಿಂದ ನಡೆದ ಮಸ್ತಕಾಭಿಷೇಕ ದೇಹ, ಮನಸ್ಸಿಗೆ ವಿಶಿಷ್ಟ ಅನುಭವ ನೀಡಿತು. ಗೊಮ್ಮಟ ಬೆಟ್ಟದಲ್ಲಿ ಪವಿತ್ರ ವಾತಾವರಣದ ಸನ್ನಿವೇಶ ನಿರ್ಮಾಣವಾಯಿತು.
ಶನಿವಾರ ಮಸ್ತಕಾಭಿಷೇಕಕ್ಕೆ 200 ಲೀಟರ್ ಕಬ್ಬಿನ ಹಾಲು, 600 ಲೀಟರ್ ಹಾಲು, 75 ಕೆ.ಜಿ. ಕಲ್ಕ ಚೂರ್ಣ, 100 ಕೆ.ಜಿ. ಅರಿಶಿನ, 75 ಕೆ.ಜಿ. ಚಂದನ ಮತ್ತು 75 ಕೆ.ಜಿ. ಅಷ್ಟಗಂಧ ಬಳಸಲಾಯಿತು.
ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ಹೆಗ್ಗಡೆ, ಡಿ.ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಹಾಗೂ ಕುಟುಂಬದವರು ವಿವಿಧ ಮಂಗಲ ದ್ರವ್ಯಗಳಿಂದ ಮಸ್ತಕಾಭಿಷೇಕ ನೆರವೇರಿಸಿದರು.
ಇಂಗ್ಲೆಂಡ್ನ ನವೀನ್ ಎಂಬ ಶ್ರಾವಕರು ತಂದು ಒಪ್ಪಿಸಿದ ಧೇಮ್ಸ್ ನದಿಯ ನೀರಿನಿಂದ ಹೆಗ್ಗಡೆಯವರು ಬಾಹುಬಲಿಗೆ ಮಸ್ತಕಾಭಿಷೇಕ ನಡೆಸಿದರು.
ಮಸ್ತಕಾಭಿಷೇಕಕ್ಕೆ ಕಾಶ್ಮೀರದಿಂದ ಶುದ್ಧ ಕೇಸರಿಯನ್ನು ತುಮಕೂರಿನ ಶ್ರೇಯಾಂಸ ಕುಮಾರ್ ಒದಗಿಸಿದ್ದಾರೆ ಎಂದು ಹೆಗ್ಗಡೆಯವರು ತಿಳಿಸಿದರು. ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದಿಂದ 5000 ಲೀಟರ್ ಮಜ್ಜಿಗೆಯನ್ನು ಕುಡಿಯಲು ಉಚಿತವಾಗಿ ವಿತರಿಸಲಾಯಿತು. ಚಾಮರಾಜನಗರದ ಪಾರ್ಶ್ವನಾಥ ಎಂಬವವರು ಕಾಡಿನಿಂದ ನೈಸರ್ಗಿಕ ವನಸ್ಪತಿಯಿಂದ ತಯಾರಿಸಿದ ಅಷ್ಟಗಂಧವನ್ನು ನೀಡಿದರು. ಶ್ರೀಗಂಧವನ್ನು ಶ್ರಾವಕ-ಶ್ರಾವಕಿಯರು ಕೊರಡನ್ನು ಅರೆದು ತಯಾರಿಸಿಕೊಟ್ಟಿದ್ದರು.