ಆನೇಕಲ್: ವಿದ್ಯುತ್ ತಂತಿ ತಗುಲಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲ್ಲೂಕಿನ ಅತ್ತಿಬೆಲೆ ಸಮೀಪದ ಬಳಗಾರನಹಳ್ಳಿಯಲ್ಲಿ ನಡೆದಿದೆ.
ಮೃತರನ್ನು ಅಸ್ಸಾಂ ಮೂಲದ ಜಿಂಟುದಾಸ್ (10) ಮತ್ತು ಮಧುಸ್ಮಿತದಾಸ್ (06) ಎಂದು ಗುರುತಿಸಲಾಗಿದೆ. ಇವರು ಅತ್ತಿಬೆಲೆ ಸಮೀಪದ ಖಾಸಗಿ ಕಾರ್ಖಾನೆಯ ಕಾರ್ಮಿಕರಾಗಿದ್ದ ಅಸ್ಸಾಂ ಮೂಲದ ದೀಪಕ್ದಾಸ್ ಮತ್ತು ಪ್ರಣೀತಾದಾಸ್ ದಂಪತಿಯ ಮಕ್ಕಳು.
ಬಳಗಾರನಹಳ್ಳಿಯ ಶ್ರೀನಿವಾಸರೆಡ್ಡಿ ಬಡಾವಣೆಯಲ್ಲಿ ತೆಂಗಿನ ಗರಿಯೊಂದು ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ. ಆಟವಾಡುತ್ತಿದ್ದ ಜಿಂಟುದಾಸ್, ಮಧುಸ್ಮಿತ ಬಯಲಿನ ಕಡೆ ಬಂದಿದ್ದಾರೆ, ಮಧುಸ್ಮಿತ ತುಂಡಾಗಿ ಬಿದ್ದಿದ್ದ ತಂತಿಯನ್ನು ಮುಟ್ಟಿದ್ದಾಳೆ. ವಿದ್ಯುತ್ ಸ್ಪರ್ಶವಾಗಿ ಕಿರುಚಿಕೊಂಡಿದ್ದಾಳೆ. ಇದರಿಂದ ಗಾಬರಿಗೊಂಡ ಜಿಂಟುದಾಸ್ ತಂಗಿಯನ್ನು ಎಳೆದುಕೊಳ್ಳಲು ಹೋದಾಗ ವಿದ್ಯುತ್ ತಗುಲಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅತ್ತಿಬೆಲೆ ಪೊಲೀಸರು ತಿಳಿಸಿದ್ದಾರೆ.
ದೀಪಕ್ದಾಸ್ ದಂಪತಿಗಿದ್ದ ಇಬ್ಬರು ಮಕ್ಕಳೂ ಮೃತಪಟ್ಟಿದ್ದು ಕುಟುಂಬ ಕಂಗಾಲಾಗಿತ್ತು. ದಂಪತಿಯ ಗೋಳು ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಭೇಟಿ ನೀಡಿದ್ದ ಬೆಸ್ಕಾಂನ ಅತ್ತಿಬೆಲೆ ವೃತ್ತದ ಕಾರ್ಯನಿರ್ವಾಹಕ ಎಂಜಿನಿಯರ್ ವಿಜಯ್ಕುಮಾರ್ ಅವಘಡದಿಂದ ಮೃತಪಟ್ಟಿರುವ ಮಕ್ಕಳ ಕುಟುಂಬಕ್ಕೆ ತಲಾ ₨ 2ಲಕ್ಷ ಪರಿಹಾರ ನೀಡಲಾಗುವುದು ಎಂದು ಹೇಳಿದರು.