ವೇದಿಕೆ ಮುಂಭಾಗದಲ್ಲಿ ಹಾಕಿದ್ದ ಶಾಮಿಯಾನದ ಒಂದು ಭಾಗ ಜೋರಾಗಿ ಬೀಸಿದ ಗಾಳಿಗೆ ಮೇಲೆದ್ದಿತು. ಶಾಮಿಯಾನಕ್ಕೆ ಆಧಾರವಾಗಿದ್ದ ಕಬ್ಬಿಣದ ಪೈಪುಗಳು ಸಹ ಮೇಲೆದ್ದವು. ಬಳಿಕ ಕಬ್ಬಿಣದ ಪೈಪುಗಳು ನಿಧಾನವಾಗಿ ನೆಲಕ್ಕೆ ಬಿದ್ದವು. ಇದರಿಂದಾಗಿ ಶಾಮಿಯಾನವೂ ಕುಸಿಯಿತು.
ಸಾರ್ವಜನಿಕರು ಆತಂಕಕ್ಕೆ ಒಳಗಾಗಿ ಕೂಗಿಕೊಂಡರು. ವೇದಿಕೆಯಲ್ಲಿದ್ದ ಶೆಟ್ಟರ್ ಸಹ ಆತಂಕಕ್ಕೆ ಒಳಗಾದರು. ಸಚಿವ ಬಸವರಾಜ ಬೊಮ್ಮಾಯಿ ಭಾಷಣವನ್ನು ಅರ್ಧಕ್ಕೇ ನಿಲ್ಲಿಸಿದರು. ದೊಡ್ಡ ಅನಾಹುತ ಕ್ಷಣ ಮಾತ್ರದಲ್ಲಿ ತಪ್ಪಿದ್ದರಿಂದ ಮುಖ್ಯಮಂತ್ರಿ, ಸಚಿವರು ನಿಟ್ಟುಸಿರು ಬಿಟ್ಟರು. ನಂತರ ಕಾರ್ಯಕ್ರಮ ಮುಂದುವರಿಯಿತು.
`ಹಣ ನೀಡದ ಕೇಂದ್ರ'
ಸಮಾರಂಭದಲ್ಲಿ ಮಾತನಾಡಿದ ಶೆಟ್ಟರ್, ನಾಲ್ಕೂವರೆ ವರ್ಷಗಳಲ್ಲಿ ಪ್ರಧಾನಿಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ರಾಜ್ಯದ ರಸ್ತೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಒಂದು ಪೈಸೆಯನ್ನೂ ನೀಡಿಲ್ಲ. ಇದರಿಂದ ಹಳ್ಳಿಗಳ ರಸ್ತೆ ಅಭಿವೃದ್ಧಿ ಸಾಧ್ಯವಾಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹಣ ನೀಡದೆ ತಾರತಮ್ಯ ಮಾಡಿತು. ಕೇಂದ್ರ ಹಣ ನೀಡದಿದ್ದರೂ ರಾಜ್ಯ ಸರ್ಕಾರವೇ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 30 ಕಿ.ಮೀ. ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಂಡಿದೆ. ಪ್ರತಿ ಕಿ.ಮೀ. ರಸ್ತೆ ನಿರ್ಮಿಸಲು ರೂ. 30 ಲಕ್ಷ ನೀಡಲಾಗುವುದು ಎಂದು ಅವರು ಹೇಳಿದರು.