ಪಾಂಡವಪುರ: ಕಾದಂಬರಿಕಾರ ತರಾಸು ಅವರ ಆಪ್ತ ಶಿಷ್ಯರೆಂದೇ ಹೆಸರಾಗಿದ್ದ ಸಾಹಿತಿ ನಾ. ಪ್ರಭಾಕರ್ (65) ಗುರುವಾರ ನಿಧನರಾದರು.
ಮೃತರಿಗೆ ಪತ್ನಿ ಇಂದ್ರಮ್ಮ ಇದ್ದಾರೆ. ಕೆಲಕಾಲ ‘ಪ್ರಜಾವಾಣಿ’ಯ ಅರೆಕಾಲಿಕ ವರದಿಗಾರರಾಗಿ ಪ್ರಭಾಕರ್ ಸೇವೆ ಸಲ್ಲಿಸಿದ್ದರು. ಅನಾರೋಗ್ಯ ಪೀಡಿತರಾಗಿದ್ದ ತರಾಸು ಅವರು ಹೇಳಿದಂತೆ ಇವರು ಕೈಬರವಣಿಗೆ ಮಾಡಿದ್ದರು.
‘ದುರ್ಗಾಸ್ತಮಾನ’ ಕಾದಂಬರಿಯನ್ನು ಇವರು ಕೈ ಬರವಣಿಗೆ ಮಾಡಿಕೊಟ್ಟಿದ್ದರು. ತರಾಸು ಅರ್ಧಕ್ಕೆ ನಿಲ್ಲಿಸಿದ್ದ ‘ಚಕ್ರೇಶ್ವರಿ’ ಕಾದಂಬರಿಯನ್ನು ಅವರು ಕಾಲವಾದ ನಂತರ ಇವರು ಪೂರ್ಣಗೊಳಿಸಿ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದರು.‘ಚಾವುಂಡರಾಯ’, ‘ಮಾಲಂಗಿಮಡು’ ಎಂಬ ಎರಡು ನಾಟಕಗಳನ್ನು, ಮಕ್ಕಳಿಗಾಗಿ ‘ಮದಕರಿನಾಯಕ’, ‘ಶ್ರೀಶಂಕರಾಚಾರ್ಯ’ ಕೃತಿಗಳನ್ನು ಹಾಗೂ ‘ಮದಕರಿ ನಾಡಿನಲ್ಲಿ’ ಎಂಬ ಹೆಸರಿನಲ್ಲಿ ಬಿಡಿ ಲೇಖನಗಳನ್ನು ಪ್ರಕಟಿಸಿದ್ದಾರೆ. ಅಲ್ಲದೆ, ‘ಕಾಮರ್ಶಿಯ ಕವನಗಳು’ ಎಂಬ ಕವನ ಸಂಕಲನಗಳನ್ನು ಹೊರತಂದಿದ್ದರು.
ತರಾಸು ಜತೆಗೆ ಪ್ರಸಿದ್ಧ ಸಾಹಿತಿ ಅನಕೃ ಅವರ ಶಿಷ್ಯರಾಗಿದ್ದು, ಇವರಿಬ್ಬರ ಕುರಿತು ಪರಿಚಯ ಪುಸ್ತಕಗಳನ್ನು ಬರೆದಿದ್ದಾರೆ. ಅಂತ್ಯಸಂಸ್ಕಾರ ಪಾಂಡವಪುರದಲ್ಲಿ ಗುರುವಾರ ಸಂಜೆ ನಡೆಯಿತು.