ಕೊಲಂಬೊ: ನೇಪಾಳದ ಲುಂಬಿನಿಯಲ್ಲಿರುವ ಬುದ್ಧನ ಜನ್ಮಸ್ಥಳದಿಂದ ಆರಂಭಿಸಿ ಭಾರತ ಮತ್ತು ಶ್ರೀಲಂಕಾದಲ್ಲಿರುವ ಬೌದ್ಧರ ಪ್ರಾರ್ಥನಾ ಸ್ಥಳಗಳ ಸರ್ಕ್ಯೂಟ್ನಲ್ಲಿ ಬೈಕ್ ಜಾಥಾ ಕಾರ್ಯಕ್ರಮವನ್ನು ಡಿಸೆಂಬರ್ ತಿಂಗಳಲ್ಲಿ ನಡೆಸಲು ಯೋಜಿಸಲಾಗಿದೆ.
ಭಾರತ, ಶ್ರೀಲಂಕಾ, ನೇಪಾಳದ ಸೇನೆಗಳ ಯೋಧರು ಜಾಥಾದಲ್ಲಿ ಭಾಗವಹಿಸುವರು ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.ಭಾರತದ ಕುಶಿನಗರ, ಬೋಧಗಯಾ, ಶ್ರಾವಸ್ಥಿ, ಸಾರಾನಾಥ, ಸಂಕಸ್ಸ ಮತ್ತಿತರ ಪ್ರದೇಶಗಳ ಮೂಲಕ ಈ ಜಾಥಾವು ಹಾದುಹೋಗಲಿದೆ.
ಮಹಾರಾಷ್ಟ್ರದಲ್ಲಿರುವ ಅಜಂತಾ, ಎಲ್ಲೋರಾ ಕಣಿವೆಗೂ ಭೇಟಿ ನೀಡಲಿದ್ದು, ರಾಮೇಶ್ವರದಿಂದ ಮನ್ನಾರ್ವರೆಗೆ ಸಮುದ್ರ ಮಾರ್ಗದಲ್ಲಿ ಹಡಗಿನಲ್ಲಿ ತೆರಳಲಿದೆ. ಆ ನಂತರ ಕೊಲಂಬೊವರೆಗೂ ರಸ್ತೆ ಮೂಲಕ ಬೈಕ್ ಜಾಥಾ ಮುಂದುವರಿಯಲಿದೆ.
ಒನ್ ಯೂನಿವರ್ಸ್ ಸಂಘಟನೆಯು ಈ ಜಾಥಾವನ್ನು ಆಯೋಜಿಸಿದೆ. ಸಂಘಟನೆಯ ಪ್ರತಿನಿಧಿಗಳು ಶ್ರೀಲಂಕಾದ ಸ್ಪೀಕರ್ ಮಹಿಂದಾ ಯಪ ಅಬೆಯವರ್ಧೆನಾ, ಸಚಿವ ಬುದ್ಧಸಾಸನಾ, ಸಂಸ್ಕೃತಿ ವ್ಯವಹಾರಗಳ ಸಚಿವ ವಿದುರ ವಿಕ್ರಮನಾಯಕೆ, ಯುವಜನ ಮತ್ತು ಕ್ರೀಡಾ ಸಚಿವ ರೋಹನ ಡಿಸ್ಸನಾಯಕ ಅವರೊಂದಿಗೆ ಚರ್ಚಿಸಿದ್ದರು.
ಜಾಥಾ ಕುರಿತು ಇತ್ತೀಚೆಗೆ ಭಾರತದಲ್ಲಿ ನಡೆದ ಚರ್ಚೆಯಲ್ಲಿಯೂ ಸಂಘಟನೆಯ ಪ್ರತಿನಿಧಿಗಳಾದ ರಾಹುಲ್ ಪಟೇಲ್, ರಿತೇಶ್ ವಸಂತ ಚಂದನ್, ಪ್ರಶಾಂತ್ ಕರುಳ್ಕರ್ ಅವರು ಭಾಗವಹಿಸಿದ್ದರು.