‘ಯೇಸುವನ್ನು ಭೇಟಿಯಾಗಬೇಕಾದರೆ ಸಮಾದಿ ಸ್ಥಿತಿಯಲ್ಲಿ ಕಠಿಣ ಉಪವಾಸ ಮಾಡಿ’ ಎಂದು ಅಮಾಯಕ ಜನರಿಗೆ ಪಾದ್ರಿಯೊಬ್ಬ ಹೇಳಿದ್ದರಿಂದ ಅವರೆಲ್ಲ ಕಠಿಣ ಉಪವಾಸ ಮಾಡಿ,ಮಾಡಿ ಸಮಾದಿಯಲ್ಲಿಯೇ ಮೃತಪಟ್ಟಿದ್ದಾರೆ. ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹಗಳನ್ನು ಕಳೆದ ಐದು ದಿನಗಳಿಂದ ಪೊಲೀಸರು ಹೊರತೆಗೆದಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ 29 ಜನರನ್ನು ರಕ್ಷಿಸಿದ್ದಾರೆ.
ಕೀನ್ಯಾದ ರೆಡ್ಕ್ರಾಸ್ ಸಂಸ್ಥೆಯ ಪ್ರಕಾರ ಮಾಲಿಂಡಿಯಲ್ಲಿ 212 ಜನ ಕಾಣೆಯಾಗಿದ್ದಾರೆ. ಅವರಲ್ಲಿ ಬಹುತೇಕರು ಹೀಗೆ ಉಪವಾಸ ಮಾಡಿಯೇ ಸತ್ತಿರಬಹುದು ಎಂದು ಶಂಕಿಸಿದ್ದಾರೆ. ಮೃತರ ಗುರುತು ಹಿಡಿಯುವುದು ಕಠಿಣ ಕೆಲಸವಾಗಿದೆ ಎಂದು ಹೇಳಿದ್ದಾರೆ.
ಶಕಹೋಲಾ ಹಳ್ಳಿಯಲ್ಲಿ ಬೀಡು ಬಿಟ್ಟಿರುವ ಪೊಲೀಸರು ಇನ್ನುಳಿದ ಮೃತದೇಹಗಳನ್ನು ಹೊರತೆಗೆಯುವ ಕೆಲಸ ಮಾಡುತ್ತಿದ್ದಾರೆ. ಮೃತರಲ್ಲಿ ಮಕ್ಕಳು ಹಾಗೂ ಮಹಿಳೆಯರೂ ಸೇರಿದ್ದಾರೆ.
ಈ ಪ್ರದೇಶದಲ್ಲಿ ವಶೀಕರಣ ವಿದ್ಯೆಯಲ್ಲಿ ಕುಖ್ಯಾತ ಆಗಿದ್ದ ಪೌಲ್ ಮೆಕೆನ್ಜೀ ಎನ್ನುವ ಪಾದ್ರಿಯೇ ಈ ದುರಂತಕ್ಕೆ ಕಾರಣ ಎನ್ನಲಾಗಿದ್ದು ಸದ್ಯ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಮೆಕೆನ್ಜೀ ಮಾಲಿಂಡಿಯ ಚರ್ಚ್ನ ಪಾದ್ರಿಯಾಗಿದ್ದು, ಮಾಟ–ಮಂತ್ರ ವಶೀಕರಣ ಆರೋಪದಲ್ಲಿ ಎರಡು ಬಾರಿ ಜೈಲಿಗೆ ಹೋಗಿ ಹೊರಬಂದಿದ್ದ. ಮೆಕೆನ್ಜಿಯನ್ನು ಜೈಲಿನಿಂದ ಹೊರಗೆ ಬಿಡಬಾರದು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಏತನ್ಮಧ್ಯೆ ಈ ಘಟನೆಯನ್ನು ಭಯೋತ್ಪಾದನೆಗೆ ಸಮನಾದ ಕೃತ್ಯ ಎಂದು ಹೇಳಿರುವ ಕೀನ್ಯಾ ಅಧ್ಯಕ್ಷ ವಿಲಿಯಮ್ ರುಟೊ, ಇದು ಸ್ವೀಕರಿಸಲಾರದ ಧಾರ್ಮಿಕ ಹೇಯ ಕೆಲಸ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.