ರಿಯೊ ಡಿ ಜನೈರೊ/ಬ್ರುಮಡಿನ್ಹೋ/ಸಾಹೊಪೌಲೊ: ಆಗ್ನೇಯ ಬ್ರೆಜಿಲ್ನ ಬೆಲೊ ಹೊರಿಜಾಂಟೆ ನಗರದ ಬಳಿ ಕಬ್ಬಿಣ ಅದಿರು ಗಣಿಗಾರಿಕೆಯ ಹೂಳು ಸಂಗ್ರಹಿಸಿದ್ದ ಅಣೆಕಟ್ಟು ಒಡೆದು ಉಂಟಾದ ಕೆಸರಿನ ಪ್ರವಾಹದಿಂದ 9 ಮಂದಿ ಮೃತಪಟ್ಟು, ಸುಮಾರು 300 ಜನರು ಕಣ್ಮರೆಯಾಗಿದ್ದಾರೆ.
ಕೆಸರಿನ ನಡುವೆ ಮನೆ, ಕಾರು, ಬಸ್ಗಳು ಹೂತುಹೋಗಿವೆ. ಕಣ್ಮರೆಯಾದವರ ಸಂಖ್ಯೆ ದ್ವಿಗುಣವಾಗುವ ಸಾಧ್ಯತೆ ಇದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಶನಿವಾರ ಅಗ್ನಿಶಾಮಕ ದಳ ಹೇಳಿಕೆಯಲ್ಲಿ ತಿಳಿಸಿದೆ.
ಬ್ರೆಜಿಲ್ನ ಮೈನಸ್ ಗೆರಿಯಾಸ್ ರಾಜ್ಯದ ಅದಿರು ಗಣಿಗಾರಿಕೆಯ ದೈತ್ಯ ಕಂಪನಿ ವೇಲ್ ಎಸ್ಎ ಕಂಪನಿ ಒಡೆತನದ ಈ ನಿರುಪಯುಕ್ತ ಅಣೆಕಟ್ಟು ಶುಕ್ರವಾರ ಮಧ್ಯಾಹ್ನ ಒಡೆದಾಗ ಬ್ರುಮಡಿನ್ಹೋ ಪಟ್ಟಣದ ಕಡೆಗೆ ನುಗ್ಗಿ ಬಂದ ಕೆಸರಿನ ಪ್ರವಾಹದಿಂದ ಈ ದುರಂತ ಸಂಭವಿಸಿದೆ.
ಗಣಿ ಕಂಪನಿಯ ಉದ್ಯೋಗಿಗಳು ಕೆಲಸ ಮಾಡುತ್ತಿದ್ದ ಪ್ರದೇಶ ಮತ್ತು ಅವರು ವಾಸಿಸುತ್ತಿದ್ದ ನೆರೆಹೊರೆಯ ಪ್ರದೇಶ ಗಣಿ ತ್ಯಾಜ್ಯ ಮತ್ತು ಕೆಸರು ನೀರಿನಿಂದ ಮುಳುಗಿ ಹೋಗಿದೆ.
ಬದುಕುಳಿದವರ ರಕ್ಷಣೆಗಾಗಿ 6 ಹೆಲಿಕಾಪ್ಟರ್ಗಳು ಶೋಧಕಾರ್ಯ ನಡೆಸುತ್ತಿದ್ದು, 51 ಮಂದಿ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ಪ್ರಾದೇಶಿಕ ನಾಗರಿಕ ರಕ್ಷಣಾ ಅಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬ್ರುಮಡಿನ್ಹೋ ನಗರಕ್ಕೆ 75 ಕಿ.ಮೀ. ದೂರದ ಮರಿಯಾನದಲ್ಲಿ ಇದೇ ರೀತಿ ಮೂರು ವರ್ಷಗಳ ಹಿಂದೆ ಅಣೆಕಟ್ಟು ಒಡೆದು 19 ಜನರು ಮೃತಪಟ್ಟಿದ್ದರು.