ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಾಜಾ: ವಿಶ್ವಸಂಸ್ಥೆಯ ಸೇವೆಯಲ್ಲಿದ್ದ ಭಾರತ ಸೇನೆ ಮಾಜಿ ಅಧಿಕಾರಿ ಸಾವು

Published 14 ಮೇ 2024, 15:26 IST
Last Updated 14 ಮೇ 2024, 15:26 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ವಿಶ್ವಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರತ ಸೇನೆ ನಿವೃತ್ತ ಅಧಿಕಾರಿ ಕರ್ನಲ್ ವೈಭವ್‌ ಅನಿಲ್ ಕಾಳೆ ರಫಾದಲ್ಲಿ ನಡೆದ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಇವರು ಭಾರತೀಯ ಸೇನೆಯಿಂದ 2022ರಲ್ಲಿ ನಿವೃತ್ತರಾಗಿದ್ದರು.

ಭಾರತೀಯ ಸೇನೆಯ ಜಮ್ಮು ಮತ್ತು ಕಾಶ್ಮೀರ ರೈಫಲ್ಸ್‌ನಲ್ಲಿ ಅವರು ಸೇವೆ ಸಲ್ಲಿಸಿದ್ದರು. ಎರಡು ತಿಂಗಳ ಹಿಂದಷ್ಟೇ ಅವರು ಭದ್ರತಾ ಸಂಯೋಜಕ ಅಧಿಕಾರಿಯಾಗಿ ವಿಶ್ವಸಂಸ್ಥೆಯ ಸುರಕ್ಷತೆ ಮತ್ತು ಭದ್ರತಾ ವಿಭಾಗಕ್ಕೆ ಸೇರ್ಪಡೆಯಾಗಿದ್ದರು. 

ರಫಾದಲ್ಲಿ ಇಸ್ರೇಲ್–ಹಮಾಸ್‌ ಬಂಡುಕೋರರ ನಡುವೆ ನಡುವೆ ಘರ್ಷಣೆ ನಡೆದಿದ್ದು, ಯೂರೋಪಿಯನ್‌ ಆಸ್ಪತ್ರೆಗೆ ತೆರಳುತ್ತಿದ್ದ ವಿಶ್ವಸಂಸ್ಥೆಯ ವಾಹನದ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಅವಘಢ ಸಂಭವಿಸಿದೆ. ದಾಳಿಯಲ್ಲಿ ಮತ್ತೊಬ್ಬ ಸಿಬ್ಬಂದಿ ಗಾಯಗೊಂಡರು.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರೆಸ್‌ ಅವರು, ‘ವಿಶ್ವಸಂಸ್ಥೆಯ ಸುರಕ್ಷತೆ ಮತ್ತು ಭದ್ರತಾ ವಿಭಾಗದ ಸಿಬ್ಬಂದಿಯ ಸಾವಿನಿಂದ ನೋವಾಗಿದೆ‘ ಎಂದು ಪ್ರತಿಕ್ರಿಯಿಸಿದರು. ಈ ದಾಳಿಯನ್ನು ಕುರಿತಂತೆ ಇಸ್ರೇಲ್‌ ತನಿಖೆಗೆ ಆದೇಶಿಸಿದೆ.

ಆಂಟೊನಿಯೊ ಗುಟೆರೆಸ್‌ ಅವರ ಉಪ ವಕ್ತಾರ ಪರ‍್ಹಾನ್‌ ಹಕ್‌ ಅವರು ಈ ಕುರಿತು ಹೇಳೀಕೆ ನೀಡಿದ್ದು, ಈ ದಾಳಿ ಬಗೆಗೆ ಸಮಗ್ರ ತನಿಖೆಗೆ ವಿಶ್ವಸಂಸ್ಥೆ ಒತ್ತಾಯಿಸಿದೆ ಎಂದು ತಿಳಿಸಿದರು. 

‘ಗಾಜಾದಲ್ಲಿ ಇದುವರೆಗೂ ವಿಶ್ವಸಂಸ್ಥೆಯ 190 ಮಂದಿ ಸಿಬ್ಬಂದಿ ಮೃತಪಟ್ಟಿದ್ದಾರೆ. ಮಾನವೀಯ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ರಕ್ಷಣೆ ನೀಡಬೇಕಾಗಿದೆ. ತಕ್ಷಣವೇ ಮಾನವೀಯ ನೆಲೆಯ ಕದನವಿರಾಮ ಘೋಷಿಸಬೇಕು’ ಎಂದು ಗುಟೆರೆಸ್‌ ಅಭಿಪ್ರಾಯಪಟ್ಟರು.

ವಿಶ್ವ ಆರೋಗ್ಯ ಸಂಘಟನೆ ಪ್ರಧಾನ ನಿರ್ದೇಶಕ ಟೆಡ್ರೊಸ್‌ ಅಧನೊಮ್ ಗೇಬ್ರೆಯೆಸುಸ್, ‘ಗಾಜಾದಲ್ಲಿ ನೆಲೆಸಿರುವ ಅನೇಕ ನಾಗರಿಕರು, ಮಾನವೀಯ ನೆಲೆಯ ಸಿಬ್ಬಂದಿ ಯುದ್ಧದಿಂದಾಗಿ ಜೀವ ಕಳೆದುಕೊಂಡಿದ್ದಾರೆ. ಶಾಂತಿ ಸ್ಥಾಪನೆಗಾಗಿ ಕದನವಿರಾಮ ಬೇಕಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT