ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ನೀತಿ, ಕೋವಿಡ್ ವಿರುದ್ಧ ಹೋರಾಟದಲ್ಲಿ ಭಾರತ ಮುಂಚೂಣಿಯಲ್ಲಿ: ಗೀತಾ ಗೋಪಿನಾಥ್

Last Updated 9 ಮಾರ್ಚ್ 2021, 1:20 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಕೊರೊನಾ ವೈರಸ್ ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ಹಾಗೂ ಲಸಿಕೆ ನೀತಿಯಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ಐಎಂಎಫ್ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಹೇಳಿದ್ದಾರೆ.

ಮಹತ್ವದ ಸಂದರ್ಭದಲ್ಲಿ ಲಸಿಕೆ ಉತ್ಪಾದಿಸಿ ಅನೇಕ ರಾಷ್ಟ್ರಗಳಿಗೆ ಕಳುಹಿಸಿಕೊಡುವ ಭಾರತದ ಕೊಡುಗೆಯನ್ನು ಅವರು ಶ್ಲಾಘಿಸಿದ್ದಾರೆ.

ಅಂತರರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಆಯೋಜಿಸಿದ್ದ ಡಾ. ಹನ್ಸಾ ಮೆಹ್ತಾ ಉಪನ್ಯಾಸ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದ್ದಾರೆ.

‘ಲಸಿಕೆ ನೀತಿಯ ವಿಷಯದಲ್ಲಿ ಭಾರತ ನಿಜವಾಗಿಯೂ ಮುಂಚೂಣಿಯಲ್ಲಿ ಕಾಣಿಸುತ್ತಿದೆ ಎಂದು ಹೇಳಲು ಬಯಸುತ್ತೇನೆ. ವಿಶ್ವದ ಲಸಿಕೆಗಳಿಗೆ ಒಂದು ಉತ್ಪಾದನಾ ಕೇಂದ್ರ ನಿಖರವಾಗಿ ಎಲ್ಲಿದೆ ಎಂದು ನೋಡಿದರೆ ಅದು ಭಾರತವಾಗಿರುತ್ತದೆ’ ಎಂದು ಅವರು ಹೇಳಿದ್ದಾರೆ.

ಭಾರತದ ‘ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ’ವನ್ನೂ ಗೋಪಿನಾಥ್ ಅವರು ಶ್ಲಾಘಿಸಿದ್ದಾರೆ. ಸಂಸ್ಥೆಯು ವಿಶ್ವದಲ್ಲೇ ಅತಿಹೆಚ್ಚು ಕೋವಿಡ್–19 ಲಸಿಕೆ ತಯಾರಿಸುತ್ತಿದೆ. ವಿಶ್ವಸಂಸ್ಥೆಯ ‘ಕೊವ್ಯಾಕ್ಸ್’ ಒಪ್ಪಂದದಡಿ ವಿತರಣೆ ಮಾಡುವ ಲಸಿಕೆಗಳನ್ನೂ ಸಂಸ್ಥೆಯೇ ತಯಾರಿಸುತ್ತಿದೆ ಎಂದು ಅವರು ಹೇಳಿದ್ದಾರೆ.

‘ಭಾರತವು ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಮುಂದಿದೆ. ಬಾಂಗ್ಲಾದೇಶ, ನೇಪಾಳ, ಮ್ಯಾನ್ಮಾರ್ ಸೇರಿದಂತೆ ಅನೇಕ ನೆರೆ ದೇಶಗಳಿಗೆ ಲಸಿಕೆಗಳನ್ನು ಸರಬರಾಜು ಮಾಡುತ್ತಿದೆ. ಜಾಗತಿಕ ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶವು ಮಹತ್ತರ ಪಾತ್ರ ವಹಿಸುತ್ತಿದೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT