ವಿಶ್ವಸಂಸ್ಥೆ: ಭದ್ರತಾ ಮಂಡಳಿಯಲ್ಲಿ ಸುಧಾರಣೆ ತರುವುದಕ್ಕೆ ಸಂಬಂಧಿಸಿ ಸರ್ಕಾರಗಳ ನಡುವಿನ ಸಮಾಲೋಚನೆಯನ್ನು ಮುಂದಿನ ಅಧಿವೇಶನದಲ್ಲಿ ನಡೆಸಲು ವಿಶ್ವಸಂಸ್ಥೆಯ ಸಾಮಾನ್ಯಸಭೆ ನಿರ್ಧರಿಸಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸುಧಾರಣೆಯಾಗಬೇಕು, ಮಂಡಳಿಯಲ್ಲಿ ಸ್ಥಾನ ಪಡೆಯಬೇಕು ಎಂಬ ಭಾರತದ ಪ್ರಯತ್ನಕ್ಕೆ ಮತ್ತೆ ಹಿನ್ನಡೆಯಾದಂತಾಗಿದೆ.
ಈ ನಿರ್ಧಾರವನ್ನು ಟೀಕಿಸಿರುವ ಭಾರತ, ‘ಭದ್ರತಾ ಮಂಡಳಿಯಲ್ಲಿ ಸುಧಾರಣೆ ತರುವುದಕ್ಕಾಗಿ ಒದಗಿದ್ದ ಮತ್ತೊಂದು ಅವಕಾಶವನ್ನು ಹಾಳು ಮಾಡಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
‘ಸುಧಾರಣೆ ಕುರಿತ ಪ್ರಕ್ರಿಯೆ ಮತ್ತೆ 75 ವರ್ಷಗಳ ಕಾಲ ನಡೆಯಲಿದ್ದು, ಯಾವುದೇ ಉದ್ದೇಶ ಸಾಧನೆಯೂ ಆಗುವುದಿಲ್ಲ’ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಹೇಳಿದ್ದಾರೆ.
‘ಮುಂದಿನ ಸಾಮಾನ್ಯಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂಬ ನಿರ್ಧಾರವು ವಿವೇಚನಾರಹಿತ ಕಸರತ್ತು ಆಗಬಾರದು’ ಎಂದೂ ಕಾಂಬೋಜ್ ಪ್ರತಿಪಾದಿಸಿದ್ದಾರೆ.
ಸೆಪ್ಟೆಂಬರ್ನಲ್ಲಿ ನಡೆಯುವ 78ನೇ ಸಾಮಾನ್ಯಸಭೆಯಲ್ಲಿ ಭದ್ರತಾ ಮಂಡಳಿಯಲ್ಲಿ ಸುಧಾರಣೆ ಕುರಿತ ಸಮಾಲೋಚನೆಯನ್ನು ನಡೆಸಲು ಗುರುವಾರ ಮುಕ್ತಾಯವಾದ ವಿಶ್ವಸಂಸ್ಥೆಯ ಸಾಮಾನ್ಯಸಭೆ ನಿರ್ಧಾರ ಕೈಗೊಳ್ಳಲಾಗಿದೆ.
ನಾಲ್ಕು ದಶಕಗಳ ಪ್ರಯತ್ನದಲ್ಲಿ ಪ್ರಗತಿ ಇಲ್ಲ: ಭಾರತ ಸಮಾನ ಮನಸ್ಕ ದೇಶಗಳೊಂದಿಗೆ ಮಾತುಕತೆ ಮುಂದುವರಿಕೆ: ಕಾಂಬೋಜ್