ನವದೆಹಲಿ: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಹೀಂ ಯಾರ್ ಖಾನ್ನಲ್ಲಿರುವ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿರುವ ಘಟನೆಗೆ ಸಂಬಂಧಿಸಿದಂತೆ ಭಾರತವು ಗುರುವಾರ ಪಾಕಿಸ್ತಾನದ ರಾಜತಾಂತ್ರಿಕರನ್ನು ಕರೆಸಿ ತನ್ನ ಬಲವಾದ ಪ್ರತಿಭಟನೆಯನ್ನು ದಾಖಲಿಸಿದೆ.
‘ಪಾಕಿಸ್ತಾನದ ರಾಜತಾಂತ್ರಿಕರನ್ನು ಗುರುವಾರ ಮಧ್ಯಾಹ್ನ ಕರೆಸಲಾಯಿತು. ಹಿಂದೂ ದೇಗುಲದ ಧ್ವಂಸ ಘಟನೆಯನ್ನು ಖಂಡಿಸಿದ ಭಾರತವು ತೀವ್ರ ಪ್ರತಿಭಟನೆ ದಾಖಲಿಸಿತು’ ಎಂದುಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
‘ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಸಮುದಾಯಗಳ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ನಡೆಯುತ್ತಿರುವ ನಿರಂತರ ದಾಳಿಗಳ ಕುರಿತು ಭಾರತವು ಕಳವಳ ವ್ಯಕ್ತಪಡಿಸಿತು’ ಎಂದೂ ಅವರು ಹೇಳಿದ್ದಾರೆ.