ವಾಷಿಂಗ್ಟನ್: ಭಾರತ ಮೂಲದ ಅಮೆರಿಕನ್ ಉದ್ಯಮಿ ಎಂ.ಆರ್ ರಂಗಸ್ವಾಮಿ ಅವರಿಗೆ ಕೆನಡಾ–ಭಾರತ ವ್ಯಾಪಾರ ಸಮಿತಿಯು 2020ನೇ ಸಾಲಿನ ‘ಜಾಗತಿಕ ಸೇವಾ ಪ್ರಶಸ್ತಿ‘ಯನ್ನು ನೀಡಿ ಗೌರವಿಸಿದೆ.
ಈ ಸಮಿತಿಯು ತನ್ನ ವಾರ್ಷಿಕ ದೀಪಾವಳಿ ಪ್ರಶಸ್ತಿ ಪುರಸ್ಕಾರ ಸಮಾರಂಭದ ಭಾಗವಾಗಿ ವರ್ಚುವಲ್ ವೇದಿಕೆ ಮೂಲಕ ಗುರುವಾರ ಜಾಗತಿಕ ಸೇವಾ ಪ್ರಶಸ್ತಿಯನ್ನು ಪ್ರದಾನ ಮಾಡಿತು.
ಕೆನಡಾ ಮತ್ತು ಭಾರತ ದೇಶಗಳಲ್ಲಿ ಸಲ್ಲಿಸಿರುವ ಅಸಾಧಾರಣ, ನಿಸ್ವಾರ್ಥ, ಸಮರ್ಪಣಾ ಮನೋಭಾವದ ಸೇವೆ ಸಲ್ಲಿಸುವ ವ್ಯಕ್ತಿಗಳನ್ನು ಗುರುತಿಸಿ ಜಾಗತಿಕ ಸೇವಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
‘ಈ ಪ್ರಶಸ್ತಿಗೆ ಭಾಜನಾರಾಗಿರುವುದು ನನ್ನ ಸೌಭಾಗ್ಯ. ಭಾರತ ಮತ್ತು ಕೆನಡಾದ ಪ್ರಜೆಗಳು ಇಂಡಿಯಾಸ್ಪೊರಾ ಫೌಂಡೇಶನ್ನ ಪ್ರಮುಖ ಭಾಗವಾಗಿದ್ದಾರೆ. ಈ ಫೌಂಡೇಶನ್ ಮೂಲಕ ಸಮಾಜದಲ್ಲಿ ದೊಡ್ಡ ಬದಲಾವಣೆ ತರಲು ಇಚ್ಛಿಸುತ್ತೇನೆ‘ ಎಂದು ಇಂಡಿಯಾಸ್ಪೊರಾ ಫೌಂಡೇಶನ್ ಅಧ್ಯಕ್ಷ ಹಾಗೂ ಸಿಲಿಕಾನ್ ವ್ಯಾಲಿ ಸಾಫ್ಟ್ವೇರ್ ಎಕ್ಸಿಕ್ಯೂಟಿವ್ ಆಗಿರುವ ಉದ್ಯಮಿ ರಂಗಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.