ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಖಿತ ಒಪ್ಪಂದಗಳಿಗೆ ಬದ್ಧವಾಗಿರದ ಚೀನಾ, ಗಡಿಯಲ್ಲಿನ ಸಂಘರ್ಷಕ್ಕೆ ಹೊಣೆ: ಜೈಶಂಕರ್

Published 7 ಮಾರ್ಚ್ 2024, 23:30 IST
Last Updated 7 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಟೋಕಿಯೊ: ‘ಭಾರತದ ಜೊತೆಗಿನ ಲಿಖಿತ ಒಪ್ಪಂದಗಳಿಗೆ ಚೀನಾ ಬದ್ಧವಾಗಿಲ್ಲ. ಉಭಯ ದೇಶಗಳ ಗಡಿಯಲ್ಲಿ 2020ರಲ್ಲಿ ಘಟಿಸಿದ ರಕ್ತಪಾತಕ್ಕೆ ನೆರೆ ರಾಷ್ಟ್ರವೇ ಹೊಣೆ’ ಎಂದು ಭಾರತ ಗುರುವಾರ ಆರೋಪಿಸಿತು.

ಇಲ್ಲಿ ರೈಸಿನಾ ದುಂಡುಮೇಜಿನ ಸಭೆಯಲ್ಲಿ ಮಾತನಾಡಿದ ವಿದೇಶಾಂಗ ಸಚಿವ ಎಸ್.ಜೈಶಂಕರ್, ‘ಉಭಯ ದೇಶಗಳ ನಡುವೆ ಕಳೆದ 45 ವರ್ಷಗಳಲ್ಲಿ ಸಂಘರ್ಷ ಸಂಭವಿಸಿರಲಿಲ್ಲ. 2020ರಲ್ಲಿ ಸ್ಥಿತಿ ಬದಲಾಗಿತ್ತು’ ಎಂದು ಉಲ್ಲೇಖಿಸಿದರು.

‘ಹಲವು ವಿಷಯಗಳಲ್ಲಿ ಪರಸ್ಪರ ಸಹಮತ ಇಲ್ಲದೇ ಇರಬಹುದು. ಆದರೆ, ನೆರೆ ರಾಷ್ಟ್ರದ ಜೊತೆಗಿನ ಲಖಿತ ಒಪ್ಪಂದಕ್ಕೂ ಒಂದು ದೇಶ ಬದ್ಧವಾಗದೇ ಇದ್ದರೆ ಸಮಸ್ಯೆ ಎದುರಾಗುತ್ತದೆ. ಬಾಂಧವ್ಯದ ಸ್ಥಿರತೆ ಕುರಿತಂತೆ ಪ್ರಶ್ನಾರ್ಥಕ ಚಿಹ್ನೆ ಮೂಡಲಿದೆ. ಮುಖ್ಯವಾಗಿ ನೆರೆ ರಾಷ್ಟ್ರದ ಉದ್ದೇಶಗಳ ಕುರಿತೇ ಅನುಮಾನಗಳು ಮೂಡುತ್ತವೆ’ ಎಂದು ಜೈಶಂಕರ್ ಹೇಳಿದರು.

1993ರ ಗಡಿಯಲ್ಲಿ ಶಾಂತಿ ಮತ್ತು ಯಥಾಸ್ಥಿತಿ ಒಪ್ಪಂದ (ಬಿಪಿಟಿಎ), ವಾಸ್ತವ ಗಡಿರೇಖೆಯುದ್ದಕ್ಕೂ ಉಭಯ ದೇಶಗಳ ಸೇನೆ ನಡುವೆ ವಿಶ್ವಾಸ ಮೂಡಿಸುವ ಯತ್ನ ಕುರಿತ 1996ರ ಒಪ್ಪಂದಗಳನ್ನು ಜೈಶಂಕರ್‌ ಉಲ್ಲೇಖಿಸಿದರು.

ಬದಲಾದ ಜಾಗತಿಕ ಸ್ಥಿತಿಯಲ್ಲಿ ಹಿಂದೂ ಮಹಾಸಾಗರ ವಲಯದಲ್ಲಿ ಶಕ್ತಿ ಕೇಂದ್ರವು ಬದಲಾಗುತ್ತಿದೆ ಎಂಬುದು ವಾಸ್ತವ. ಸಾಮರ್ಥ್ಯ, ಪ್ರಭಾವ ಮತ್ತು ನಿರೀಕ್ಷೆಗಳಲ್ಲಿ ಮಹತ್ತರ ಬದಲಾವಣೆಗಳು ಇದ್ದಾಗ, ಅದಕ್ಕೆ ಪೂರಕವಾದ ಅಂಶಗಳಿಗೂ ಅನ್ವಯಿಸಿ ಕಾರ್ಯತಂತ್ರ ಪರಿಣಾಮಗಳು ಇರುತ್ತವೆ ಎಂದು ಜೈಶಂಕರ್ ವ್ಯಾಖ್ಯಾನಿಸಿದರು. 

‘ನಿಮಗೆ ಇಷ್ಟವಾಗಲಿ, ಬಿಡಲಿ ಅದು ವಾಸ್ತವ. ವಾಸ್ತವದ ನೆಲೆಗಟ್ಟಿನಲ್ಲೇ ಅದನ್ನು ಎದುರಿಸಲೇಬೇಕು. ಎಲ್ಲ ಹೇಳುವಂತೆ ಬದಲಾವಣೆ ಸಹಜ ಎಂದು ಭಾವಿಸೋಣ. ಆದರೆ, ಸಾಧ್ಯವಾದಷ್ಟು ಸ್ಥಿರವಾಗಿರಿಸಲು ಯತ್ನಿಸೋಣ’ ಎಂದು ಹೇಳಿದರು.

ಉಭಯ ದೇಶಗಳ ಸೇನೆಗಳ ನಡುವೆ ಪೂರ್ವ ಲಡಾಖ್‌ನಲ್ಲಿ ಮೇ 5, 2020ರಲ್ಲಿ ಸಂಘರ್ಷ ಉಂಟಾಗಿತ್ತು. ಗಾಲ್ವಾನ್ ಕಣಿವೆಯಲ್ಲಿ ಸೇನೆಗಳ ನಡುವೆ ಘರ್ಷಣೆಯ ಬಳಿಕ ಬಾಂಧವ್ಯದ ಮೇಲೂ ಪ್ರತಿಕೂಲ ಪರಿಣಾಮವಾಗಿತ್ತು.

ಪೂರ್ವ ಲಡಾಖ್‌ ಸಂಘರ್ಷದ ಬಳಿಕ, ಗಡಿರೇಖೆಯುದ್ದಕ್ಕೂ ಶಾಂತಿ–ಸೌಹಾರ್ದ ನೆಲೆಸದೇ ಉಭಯ ದೇಶಗಳ ನಡುವಿನ ಬಾಂಧವ್ಯವು ಸಹಜಸ್ಥಿತಿಗೆ ಮರಳುವುದಿಲ್ಲ ಎಂಬ ದೃಢ ನಿಲುವನ್ನು ಭಾರತ ತಳೆದಿದೆ.

ಭಾಷಣದ ಬಳಿಕ ಪ್ರಶ್ನೆಗೆ ಉತ್ತರಿಸಿದ ಜೈಶಂಕರ್, ‘ಬದಲಾದ ಜಗತ್ತಿನಲ್ಲಿ ಇತರೆ ದೇಶಗಳ ಜೊತೆ ಭಾರತದ ಸಮತೋಲನ ಏರುಪೇರಾಗುತ್ತಿದೆ. ಈ ವಿಷಯದಲ್ಲಿ ಕಟುವಾದ ನಿಲುವನ್ನೇ ಹೊಂದಿರಬೇಕು ಎಂದೇನೂ ಇಲ್ಲ’ ಎಂದರು.

‘ವಿಶ್ವಸಂಸ್ಥೆ ಸಮಕಾಲೀನವಾಗಿಸಲು ಭಾರತ–ಜಪಾನ್ ಜಂಟಿ ಯತ್ನ’

ಏಷ್ಯಾ ವಲಯದಲ್ಲಿ ಭಾರತ ಮತ್ತು ಜಪಾನ್ ಶಕ್ತಿ ಕೇಂದ್ರಗಳಾಗಿವೆ. ವಿಶ್ವಸಂಸ್ಥೆ ಮುಕ್ತ ಮತ್ತು ಪಾರದರ್ಶಕವಾಗಿರಬೇಕು ನಿಯಮಗಳಿಗೆ ಪೂರಕವಾಗಿರಬೇಕು ಎಂಬುದು ಸೇರಿದಂತೆ ಅದನ್ನು ಹೆಚ್ಚು ಸಮಕಾಲೀನಗೊಳಿಸಲು ಯತ್ನಿಸುತ್ತಿವೆ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್ ಅಭಿಪ್ರಾಯಪಟ್ಟಿದ್ದಾರೆ.

ದಕ್ಷಿಣ ಕೊರಿಯಾ ಜಪಾನ್‌ಗೆ ನಾಲ್ಕು ದಿನದ ಪ್ರವಾಸ ಕೈಗೊಂಡಿರುವ ಅವರು ಸಾಮಾನ್ಯ ಗುರಿ ಸಾಧಿಸಲು ಈ ಎರಡೂ ರಾಷ್ಟ್ರಗಳು ಹೇಗೆ ಪರಸ್ಪರ ಸಹಕಾರಿಯಾಗಿವೆ ಎಂಬುದನ್ನು ಜಗತ್ತು ಗಮನಿಸುತ್ತಿದೆ ಎಂದು ಹೇಳಿದರು.

ಇಲ್ಲಿ ರೈಸಿನಾ ದುಂಡುಮೇಜಿನ ಸಭೆಯಲ್ಲಿ ಮಾತನಾಡಿದ ಅವರು ‘ವಿಶ್ವಸಂಸ್ಥೆಯು ಜಗತ್ತಿನ ಏಕಮಾತ್ರ ಅಭಿವ್ಯಕ್ತಿಯಾಗಿದೆ. ಈ ಜಾಗತಿಕ ಸಂಸ್ಥೆಯ ಸುಧಾರಣೆ ಅಗತ್ಯವಾಗಿದೆ. ಸುಧಾರಣೆ ಎಂಬುದು ಪರಮೋಚ್ಛ ಆದ್ಯತೆ. ಜಿ4 ಶೃಂಗದ ಸದಸ್ಯ ರಾಷ್ಟ್ರಗಳಂತೆ ಭಾರತ ಜಪಾನ್‌ ಕೂಡಾ ಸುಧಾರಣೆ ಬಯಸುತ್ತಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT