ಕೊಲೊಂಬೊ:‘ಮಹಿಂದಾ ರಾಜಪಕ್ಸೆ ಸಂಸತ್ತಿನಲ್ಲಿ ಬಹುಮತ ಸಾಬೀತುಪಡಿಸದ ಹೊರತು ಅವರನ್ನು ಪ್ರಧಾನಮಂತ್ರಿ ಎಂದು ಪರಿಗಣಿಸುವುದಿಲ್ಲ’ ಎಂದು ಶ್ರೀಲಂಕಾದ ಸ್ಪೀಕರ್ ಕರು ಜಯಸೂರ್ಯ ಹೇಳಿದ್ದಾರೆ.
‘ಸಂಸತ್ತನ್ನು ವಜಾಗೊಳಿಸಿ ಪ್ರಧಾನಮಂತ್ರಿ ರನಿಲ್ ವಿಕ್ರಮಸಿಂಘೆ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಕ್ರಮ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದುದು’ ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ರಾಷ್ಟ್ರಪತಿ ಕೈಗೊಂಡಿರುವ ಕ್ರಮ ಸಂವಿಧಾನಕ್ಕೆ ವಿರುದ್ಧವಾಗಿದ್ದು. ನಾವು ಅದನ್ನು ವಿರೋಧಿಸುತ್ತೇವೆ ಎಂದಿರುವ ಹಲವು ಸಂಸದರು,ಅಧ್ಯಕ್ಷರ ನಡೆಯ ವಿರುದ್ಧ ಪ್ರತಿಭಟಿಸಲು ಅವಕಾಶ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ’ ಎಂದು ಜಯಸೂರ್ಯ ಸೋಮವಾರ ಹೇಳಿದ್ದಾರೆ.
‘ರನಿಲ್ ವಿಕ್ರಮಸಿಂಘೆಯವರನ್ನೇಪ್ರಧಾನಮಂತ್ರಿಯನ್ನಾಗಿ ಮುಂದುವರಿಸಬೇಕು ಎಂದು ನನಗೆ ಹಲವು ಸಂಸದರು ಮನವಿ ಮಾಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಬಹುಮತವೇ ಪರಿಗಣಿಸಬೇಕಾದ ಪ್ರಮುಖ ಅಂಶವಾಗಿರಬೇಕು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮೊದಲು, ನವೆಂಬರ್ 7ಕ್ಕೆ ಸಂಸತ್ ಅಧಿವೇಶನ ಕರೆಯಲಾಗುವುದು ಎಂದು ಸಿರಿಸೇನಾ ಹೇಳಿದ್ದರು. ಆದರೆ, ಈಗ ಅದನ್ನು ನವೆಂಬರ್ 14ಕ್ಕೆ ಮುಂದೂಡಿದ್ದಾರೆ.
‘ರಾಜಕೀಯ ಅಸ್ಥಿರತೆ ಕೊನೆಗಾಣಿಸಲು ಸಂಸತ್ ಅಧಿವೇಶನವನ್ನು ಆದಷ್ಟು ಬೇಗನೆ ಕರೆಯಬೇಕು’ ಎಂದೂ ಸ್ಪೀಕರ್ ಹೇಳಿದ್ದಾರೆ.