ಮಾಲೆ: ಭಾರತ ವಿರೋಧಿ ಧೋರಣೆಯನ್ನು ಮುಂದುವರಿಸಿರುವ ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರು, ಮೇ 10ರ ಬಳಿಕ ಭಾರತದ ಯಾವೊಬ್ಬ ಸೇನಾ ಸಿಬ್ಬಂದಿಯನ್ನೂ ದೇಶದಲ್ಲಿ ಇಟ್ಟುಕೊಳ್ಳುವುದಿಲ್ಲ. ನಾಗರಿಕರ ಪೋಷಾಕಿನಲ್ಲಿ ಕೂಡ ಸೇನಾ ಸಿಬ್ಬಂದಿಯನ್ನು ದೇಶದಲ್ಲಿ ಇರಲು ಬಿಡುವುದಿಲ್ಲ ಎಂದು ಹೇಳಿದ್ದಾರೆ ಎಂದು ಮಂಗಳವಾರ ಮಾಧ್ಯಮವೊಂದು ವರದಿ ಮಾಡಿದೆ.
ವಿಮಾನಯಾನ ವೇದಿಕೆಯೊಂದರ ಉಸ್ತುವಾರಿ ವಹಿಸಿಕೊಳ್ಳಲು ಭಾರತೀಯ ನಾಗರಿಕ ಸೇವೆಯಲ್ಲಿರುವ ತಂಡವು ಮಾಲ್ದೀವ್ಸ್ ತಲುಪಿ ಒಂದು ವಾರ ಕಳೆಯುವ ಮುನ್ನವೇ ಮುಯಿಜು ಅವರ ಈ ಹೇಳಿಕೆ ಹೊರಬಿದ್ದಿದೆ.
ಬಾ ಅಟೊಲ್ ಐದಫುಷಿ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಭಾರತೀಯ ಸೇನೆಯನ್ನು ದೇಶದಿಂದ ಹೊರಹಾಕುವಲ್ಲಿ ನಮ್ಮ ಸರ್ಕಾರ ಯಶಸ್ವಿಯಾಗಿದೆ. ಹೀಗಿರುವಾಗ, ಗಾಳಿಸುದ್ದಿ ಹಬ್ಬಿಸುವವರು ಇದೀಗ ಪರಿಸ್ಥಿತಿಯನ್ನು ತಿರುಚಲು ಯತ್ನಿಸುತ್ತಿದ್ದಾರೆ’ ಎಂಬುದಾಗಿ ಅವರು ಹೇಳಿದ್ದಾರೆ ಎಂದು ವರದಿಯಾಗಿದೆ.